ನಮ್ಮ ಶೂಟರ್‌ಗಳಿಂದ ಭಾರತಕ್ಕೆ ಹೆಮ್ಮೆ: ಪ್ರಧಾನಿ ಮೋದಿ ಶ್ಲಾಘನೆ

| Published : Jul 31 2024, 01:01 AM IST

ಸಾರಾಂಶ

ಸರಬ್ಜೋತ್‌ಗೆ ಕರೆ ಮಾಡಿ ಅವರ ಸಾಧನೆಯನ್ನು ಮೋದಿ ಕೊಂಡಾಡಿದರು. ಮನು ಮೊದಲ ಪದಕ ಗೆದ್ದಾಗ ಅವರಿಗೂ ಮೋದಿ ಕರೆ ಮಾಡಿ ಅಭಿನಂದಿಸಿದ್ದರು.

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಸಾಧನೆ ಮಾಡಿದ ಮನು ಭಾಕರ್‌-ಸರಬ್ಜೋತ್‌ ಸಿಂಗ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಸರಬ್ಜೋತ್‌ಗೆ ಕರೆ ಮಾಡಿ ಅವರ ಸಾಧನೆಯನ್ನು ಮೋದಿ ಕೊಂಡಾಡಿದರು. ಮನು ಮೊದಲ ಪದಕ ಗೆದ್ದಾಗ ಅವರಿಗೂ ಮೋದಿ ಕರೆ ಮಾಡಿ ಅಭಿನಂದಿಸಿದ್ದರು. ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ‘ನಮ್ಮ ಶೂಟರ್‌ಗಳ ಸಾಧನೆಯಿಂದಾಗಿ ಭಾರತ ಹೆಮ್ಮೆ ಪಡುತ್ತಿದೆ. ಒಲಿಂಪಿಕ್ಸ್‌ನ ಕಂಚಿನ ಪದಕ ಗೆದ್ದ ಮನು ಭಾಕರ್‌, ಸರಬ್ಜೋತ್ ಸಿಂಗ್ ಅವರಿಗೆ ಅಭಿನಂದನೆಗಳು. ಇಬ್ಬರೂ ಉತ್ತಮ ಕೌಶಲ್ಯ ಪ್ರದರ್ಶಿಸಿದ್ದಾರೆ. ಅವರ ಸಾಧನೆಗೆ ಭಾರತವೇ ಖುಷಿಪಡುತ್ತಿದೆ’ ಎಂದು ಶ್ಲಾಘಿಸಿದ್ದಾರೆ. ಅಲ್ಲದೆ, ರಾಷ್ಟ್ರಪತಿ ದ್ರೌಪದಿ ಮುರ್ಮು, ಭಾರತದ ಮೊದಲ ಒಲಿಂಪಿಕ್ಸ್‌ ಚಿನ್ನ ವಿಜೇತ ಶೂಟರ್‌ ಅಭಿನವ್ ಬಿಂದ್ರಾ, ಕೇಂದ್ರ ಕ್ರೀಡಾ ಸಚಿವ ಮಾನ್ಸುಖ್ ಮಾಂಡವಿಯಾ, ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸದಸ್ಯೆ ನೀತಾ ಅಂಬಾನಿ, ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಭಾರತದ ಟಿ20 ನಾಯಕ ಸೂರ್ಯಕುಮಾರ್‌ ಯಾದವ್‌ ಸೇರಿ ಪ್ರಮುಖರು ಮನು ಭಾಕರ್‌-ಸರಬ್ಜೋತ್‌ ಸಾಧನೆಯನ್ನು ಕೊಂಡಾಡಿದ್ದಾರೆ.