ರಣಜಿ ಫೈನಲ್‌: 42ನೇ ಟ್ರೋಫಿ ಮೇಲೆ ಕಣ್ಣಿಟ್ಟ ಮುಂಬೈಗೆ ವಿದರ್ಭ ಸವಾಲು

| Published : Mar 10 2024, 01:30 AM IST

ಸಾರಾಂಶ

ಮುಂಬೈ ತಂಡ ಕ್ವಾರ್ಟರ್‌ನಲ್ಲಿ ಬರೋಡಾ, ಸೆಮಿಫೈನಲ್‌ನಲ್ಲಿ ತಮಿಳುನಾಡನ್ನು ಸೋಲಿಸಿದೆ. ಅತ್ತ ವಿದರ್ಭ ಕ್ವಾರ್ಟರ್‌ನಲ್ಲಿ ಕರ್ನಾಟಕ, ಸೆಮೀಸ್‌ನಲ್ಲಿ ಮಧ್ಯಪ್ರದೇಶವನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿದೆ.

ಮುಂಬೈ: ರಣಜಿ ಟ್ರೋಫಿ ರಾಷ್ಟ್ರೀಯ ಪ್ರಥಮ ದರ್ಜೆ ಕ್ರಿಕೆಟ್‌ನ ಫೈನಲ್‌ ಪಂದ್ಯಕ್ಕೆ ವೇದಿಕೆ ಸಜ್ಜುಗೊಂಡಿದ್ದು, ಪ್ರಶಸ್ತಿಗಾಗಿ ಭಾನುವಾರದಿಂದ ಮಹಾರಾಷ್ಟ್ರದ 2 ತಂಡಗಳಾದ ಮುಂಬೈ ಹಾಗೂ ವಿದರ್ಭ ಪರಸ್ಪರ ಸೆಣಸಾಡಲಿವೆ. ಪಂದ್ಯಕ್ಕೆ ಮುಂಬೈನ ವಾಂಖೇಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ರಣಜಿ ಕ್ರಿಕೆಟ್‌ನ ದೊರೆ ಎನಿಸಿಕೊಂಡಿರುವ ಮುಂಬೈ ದಾಖಲೆಯ 48ನೇ ಬಾರಿ ಫೈನಲ್‌ ಆಡುತ್ತಿದ್ದು, 42ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅತ್ತ 2017-18, 2018-19ರ ಚಾಂಪಿಯನ್‌ ವಿದರ್ಭ 3ನೇ ಬಾರಿ ಚಾಂಪಿಯನ್‌ ಎನಿಸಿಕೊಳ್ಳುವ ಕಾತರದಲ್ಲಿದೆ.ಎಲೈಟ್‌ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ನಾಕೌಟ್‌ಗೇರಿದ್ದ ಮುಂಬೈ ಕ್ವಾರ್ಟರ್‌ನಲ್ಲಿ ಬರೋಡಾ, ಸೆಮಿಫೈನಲ್‌ನಲ್ಲಿ ತಮಿಳುನಾಡನ್ನು ಸೋಲಿಸಿದೆ. ಮತ್ತೊಂದೆಡೆ ‘ಬಿ’ ಗುಂಪಿನ ಅಗ್ರಸ್ಥಾನಿ ವಿದರ್ಭ ಕ್ವಾರ್ಟರ್‌ನಲ್ಲಿ ಕರ್ನಾಟಕ, ಸೆಮೀಸ್‌ನಲ್ಲಿ ಮಧ್ಯಪ್ರದೇಶವನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿದೆ.ಮುಂಬೈನಲ್ಲಿ ಅನುಭವಿಗಳಾದ ಅಜಿಂಕ್ಯಾ ರಹಾನೆ, ಶ್ರೇಯಸ್‌, ಶಾರ್ದೂಲ್‌ ಠಾಕೂರ್‌, ಪೃಥ್ವಿ ಶಾ, ಶಮ್ಸ್‌ ಮುಲಾನಿ ಜೊತೆ ಮುಶೀರ್‌, ತನುಶ್ ಕೋಟ್ಯಾನ್‌, ಭೂಪೆನ್‌ ಲಲ್ವಾನಿ ಇದ್ದಾರೆ. ಕರುಣ್‌ ನಾಯರ್‌, ಧ್ರುವ್‌ ಶೋರೆ, ಅಕ್ಷಯ್‌ ವಾಡ್ಕರ್‌, ಅಥರ್ವ ತೈಡೆ, ಯಶ್‌ ರಾಥೋಡ್‌ ವಿದರ್ಭದ ಬ್ಯಾಟಿಂಗ್‌ ಆಧಾರಸ್ತಂಭಗಳಾಗಿದ್ದು, ಆದಿತ್ಯ ಸರ್ವಾಟೆ, ಆದಿತ್ಯ ಠಾಕ್ರೆ ಬೌಲಿಂಗ್‌ ವಿಭಾಗದಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ.