ರಣಜಿ ಕ್ರಿಕೆಟ್‌ : ಕರ್ನಾಟಕದ ದಾಳಿಗೆ ತತ್ತರಿಸಿದ ಬಿಹಾರ ತಂಡ , ಕೇವಲ 143ಕ್ಕೆ ಆಲೌಟ್‌

| Published : Oct 27 2024, 02:37 AM IST / Updated: Oct 27 2024, 04:08 AM IST

ಸಾರಾಂಶ

ಶ್ರೇಯಸ್‌ಗೆ 4, ಮೊಹ್ಸಿನ್‌ಗೆ 3 ವಿಕೆಟ್‌. ಮೊದಲೆರಡೂ ಪಂದ್ಯಗಳಲ್ಲಿ ಮಳೆ ಹಿನ್ನೆಲೆಯಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ರಾಜ್ಯ ತಂಡ ಬಿಹಾರ ವಿರುದ್ಧ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ.

ಪಾಟ್ನಾ: ಸ್ಪಿನ್ನರ್‌ಗಳ ಮಾರಕ ದಾಳಿ ನೆರವಿನಿಂದ ಕರ್ನಾಟಕ ತಂಡ ಬಿಹಾರ ವಿರುದ್ಧ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದ ಮೊದಲ ದಿನವೇ ಪ್ರಾಬಲ್ಯ ಸಾಧಿಸಿದೆ. ಮೊದಲೆರಡೂ ಪಂದ್ಯಗಳಲ್ಲಿ ಮಳೆ ಹಿನ್ನೆಲೆಯಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ರಾಜ್ಯ ತಂಡ ಬಿಹಾರ ವಿರುದ್ಧ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ.

ಮೊದಲು ಬ್ಯಾಟ್‌ ಮಾಡಿದ ಬಿಹಾರ 55.5 ಓವರ್‌ಗಳಲ್ಲಿ ಕೇವಲ 143ಕ್ಕೆ ಆಲೌಟಾಯಿತು. ಶರ್ಮನ್‌ ನಿಗ್ರೋದ್‌(60) ಹಾಗೂ ಬಿಪಿನ್‌ ಸೌರಭ್‌(31) ಹೊರತುಪಡಿಸಿ ಬೇರೆ ಯಾರೂ ಬಿಹಾರದ ನೆರವಿಗೆ ಬರಲಿಲ್ಲ. 

ಒಂದು ಹಂತದಲ್ಲಿ 121ಕ್ಕೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡ ಬಳಿಕ 22 ರನ್ ಸೇರಿಸುವಷ್ಟರಲ್ಲಿ ಗಂಟುಮೂಟೆ ಕಟ್ಟಿತು. ಮಾರಕ ದಾಳಿ ಸಂಘಟಿಸಿದ ಶ್ರೇಯಸ್ ಗೋಪಾಲ್‌ 4, ಮೊಹ್ಸಿನ್‌ ಖಾನ್‌ 3 ವಿಕೆಟ್‌ ಕಿತ್ತರು.ಬಳಿಕ ಇನ್ನಿಂಗ್ಸ್‌ ಆರಂಭಿಸಿರುವ ಕರ್ನಾಟಕ ಮೊದಲ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 16 ರನ್‌ ಗಳಿಸಿದ್ದು, ಇನ್ನೂ 127 ರನ್‌ ಹಿನ್ನಡೆಲ್ಲಿದೆ. ಸ್ಕೋರ್‌: ಬಿಹಾರ 143/10 (ಶರ್ಮನ್‌ 60, ಬಿಪಿನ್‌ 31, ಶ್ರೇಯಸ್‌ 4-28, ಮೊಹ್ಸಿನ್‌ 3-50) ಕರ್ನಾಟಕ 16/0 (ಮೊದಲ ದಿನದಂತ್ಯಕ್ಕೆ) (ನಿಕಿನ್‌ 11*, ಸುಜಯ್‌ 4*)

ಮಯಾಂಕ್‌ಗೆ ಅನಾರೋಗ್ಯ

ಕರ್ನಾಟಕ ನಾಯಕ ಮಯಾಂಕ್‌ ಅಗರ್‌ವಾಲ್‌ ಪಂದ್ಯದ ನಡುವೆ ಅನಾರೋಗ್ಯಕ್ಕೆ ತುತ್ತಾದರು. ಹೀಗಾಗಿ ಅವರು ಬ್ಯಾಟಿಂಗ್‌ಗೆ ಆಗಮಿಸಲಿಲ್ಲ. ಅವರ ಬದಲು ನಿಕಿನ್‌ ಜೋಸ್‌ ಜೊತೆ ಸುಜಯ್‌ ಸತೇರಿ ಆರಂಭಿಕರಾಗಿ ಕಣಕ್ಕಿಳಿದರು.