ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಮರಂದೋಡ-ಯವಕಪಾಡಿ ಗ್ರಾಮಗಳ ಅಂಚಿನಲ್ಲಿ ಶುಕ್ರವಾರ ರಾತ್ರಿ ಬೆಟ್ಟಕ್ಕೆ ಬೆಂಕಿ ಬಿದ್ದಿದ್ದು ವ್ಯಾಪಕವಾಗಿ ಹೊತ್ತಿ ಉರಿಯತೊಡಗಿ ಕಾಡು ಭಸ್ಮವಾಗಿದೆ.
ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿನ ಕಾಡು ಸಮೀಪದ ತಡಿಯಂಡಮೊಲ್ ಬೆಟ್ಟದ ಸಾಲಿನ ಕರಡಿಮೊಳೆ ಎಂಬಲ್ಲಿ ಬೆಂಕಿ ಕಾಣಿಸಿಕೊಂಡಿದ್ದು
ವಿಷಯ ಅರಿತ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶನಿವಾರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಇದೀಗಾಗಲೇ ಸಣ್ಣ ಮರ ಗಿಡಗಳು ಸೇರಿದಂತೆ ನೂರಾರು ಎಕ್ರೆ ಅರಣ್ಯ ಸುಟ್ಟು ಹೋಗಿದೆ. ಬಿಸಿಲಿನ ಝಳ ಹೆಚ್ಚಿದ್ದು ಬೆಂಕಿ ನಂದಿಸುವುದು ಕಷ್ಟಕರವಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ದೇವಯ್ಯ ಹೇಳಿದ್ದು ಈ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳ ತರಲು ಅಸಾಧ್ಯವಾಗಿದ್ದು ಬೆಂಕಿ ನಂದಿಸುವ ಕಾರ್ಯ ದುಸ್ತರವಾಗಿದೆ.
ಈ ಸಂದರ್ಭ ಗ್ರಾಮ ಪಂಚಾಯ್ತಿ ಸದಸ್ಯರಾದ ಹರೀಶ್ ಮೊಣ್ಣಪ್ಪ, ಲೀಲಾವತಿ. ಕೆ. ಆರ್., ಅರಣ್ಯಾಧಿಕಾರಿ ದೇವಯ್ಯ, ಉಪ ವಲಯ ಅರಣ್ಯಾಧಿಕಾರಿ ಅನಿಲ್ ಸಿ. ಟಿ., ಗಸ್ತು ವನಪಾಲಕ ಮಾಲತೇಶ ಬಡಿಗೇರ್, ಕ್ಯಾಂಪ್ ಸಿಬ್ಬಂದಿ ಸುರೇಶ್, ಬಿ. ಆರ್. ಭರತ್, ಬಿ. ಜಿ ಲತೇಶ್, ವಿಕಾಸ್, ಮಹೇಶ್ ಪೂಜಾರಿ, ಗ್ರಾಮಸ್ಥರಾದ ನಾಚಪ್ಪ, ಕೃತಿಕ ಮತ್ತು ವರುಣ ವಲಯ ಬೆಂಕಿ ನಂದಿಸುವಿಕೆ ಕಾರ್ಯದಲ್ಲಿ ತೊಡಗಿ ಹರಸಾಹಸ ಪಟ್ಟರೂ ನಂದಿಸಲು ಸಾಧ್ಯವಾಗಿಲ್ಲ.