ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಚುನಾವಣೆಗೆ ವೆಂಕಟೇಶ್‌ ಪ್ರಸಾದ್‌, ವಿನಯ್‌ ಮೃತ್ಯುಂಜಯ ಸ್ಪರ್ಧೆ!

| Published : Aug 15 2025, 01:00 AM IST

ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಚುನಾವಣೆಗೆ ವೆಂಕಟೇಶ್‌ ಪ್ರಸಾದ್‌, ವಿನಯ್‌ ಮೃತ್ಯುಂಜಯ ಸ್ಪರ್ಧೆ!
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಟೋಬರ್‌ನಲ್ಲಿ ಕೆಎಸ್‌ಸಿಎಗೆ ಹೊಸ ಸಮಿತಿ. ಮರು ಆಯ್ಕೆ ಬಯಸಿ ಇಬ್ಬರು ಕಣಕ್ಕೆ. ಈ ಹಿಂದೆ ಕೆಎಸ್‌ಸಿಎ ಉಪಾಧ್ಯಕ್ಷರಾಗಿದ್ದ ವೆಂಕಟೇಶ್‌. ಖಜಾಂಚಿಯಾಗಿದ್ದ ವಿನಯ್‌.

ಕನ್ನಡಪ್ರಭ ವಾರ್ತೆ ಬೆಂಗಳೂರುಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಚುನಾವಣೆ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಸ್ಪರ್ಧಿಸಲಿದ್ದಾರೆ. ಅವರ ಜೊತೆಗೆ ಕೆಎಸ್‌ಸಿಎ ಮಾಜಿ ಖಜಾಂಚಿ ವಿನಯ್‌ ಮೃತ್ಯುಂಜಯ ಕೂಡಾ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎಂದು ಕೆಎಸ್‌ಸಿಎ ಉನ್ನತ ಮೂಲಗಳಿಂದ ‘ಕನ್ನಡಪ್ರಭ’ಕ್ಕೆ ಮಾಹಿತಿ ಲಭ್ಯವಾಗಿದೆ.

ಭಾರತದ ಪರ 33 ಟೆಸ್ಟ್‌, 161 ಏಕದಿನ ಪಂದ್ಯಗಳನ್ನಾಡಿರುವ 56 ವರ್ಷದ ವೆಂಕಟೇಶ್‌ ಈ ಹಿಂದೆ 2010ರಿಂದ 2013ರ ವರೆಗೆ ಕೆಎಸ್‌ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಗ ಅನಿಲ್‌ ಕುಂಬ್ಳೆ ಅಧ್ಯಕ್ಷರಾಗಿದ್ದರೆ, ಜಾವಗಲ್‌ ಶ್ರೀನಾಥ್‌ ಕಾರ್ಯದರ್ಶಿಯಾಗಿದ್ದರು. 12 ವರ್ಷ ಬಳಿಕ ವೆಂಕಟೇಶ್‌ ಮತ್ತೆ ಕೆಎಸ್‌ಸಿಎಗೆ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ.ಇನ್ನು, ಕೆಎಸ್‌ಸಿಎ ಆಡಳಿತ ಸಮಿತಿ ಸದಸ್ಯ, ವಕ್ತಾರರಾಗಿದ್ದ ವಿನಯ್‌ ಮೃತ್ಯುಂಜಯ 2019ರಿಂದ 2022ರ ವರೆಗೆ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಬಿಸಿಸಿಐ ಆರ್ಥಿಕ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಕೂಡಾ ಈ ಬಾರಿ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.ಸದ್ಯ ಕೆಎಸ್‌ಸಿಎಗೆ ರಘುರಾಮ್‌ ಭಟ್‌ ಅಧ್ಯಕ್ಷರಾಗಿದ್ದಾರೆ. ಕಾರ್ಯದರ್ಶಿಯಾಗಿದ್ದ ಎ.ಶಂಕರ್‌, ಖಜಾಂಚಿಯಾಗಿದ್ದ ಇ.ಎಸ್‌. ಜೈರಾಮ್‌ ಇತ್ತೀಚೆಗೆ ಸಂಭವಿಸಿದ ಭೀಕರ ಕಾಲ್ತುಳಿತದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮತ್ತೆ ರಾಜ್ಯ ಕ್ರಿಕೆಟ್‌ನ ಮೇಲೆತ್ತುವ ಸವಾಲು

ಚುನಾವಣೆಯಲ್ಲಿ ಸ್ಪರ್ಧಿಸಲಿರುವ ವೆಂಕಟೇಶ್‌ ಹಾಗೂ ವಿನಯ್‌ ರಾಜ್ಯ ಕ್ರಿಕೆಟ್‌ ಸಂಸ್ಥೆಯನ್ನು ಮತ್ತೊಮ್ಮೆ ಉನ್ನತ ಮಟ್ಟಕ್ಕೇರಿಸುವ ವಿಶ್ವಾಸ ಹೊಂದಿದ್ದಾರೆ. ಈ ಹಿಂದೆ ವಿನಯ್‌ ಅವರ ಅವಧಿಯಲ್ಲಿ ಕೆಎಸ್‌ಸಿಎ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿತ್ತು. ಕ್ರೀಡಾಂಗಣದ ಸಬ್‌ ಏರ್‌ ಸಿಸ್ಟಮ್‌ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಹಿಂದೆ ವಿನಯ್‌ ಕೊಡುಗೆಯಿದೆ. ಸದ್ಯ ಕಾಲ್ತುಳಿತದಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹಲವು ಮಹತ್ವದ ಟೂರ್ನಿ, ಸರಣಿ ಸ್ಥಳಾಂತರಗೊಂಡಿವೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಆಯ್ಕೆಯಾಗುವ ಹೊಸ ಸಮಿತಿಗೆ ಚಿನ್ನಸ್ವಾಮಿಯ ಗತವೈಭವ ಮರಳಿಸುವುದು ಸೇರಿ ಹಲವು ಸವಾಲುಗಳು ಎದುರಾಗಲಿವೆ.