ವಿಜಯ್‌ ಹಜಾರೆ ಏಕದಿನ: ಮಯಾಂಕ್‌ ಹೋರಾಟದ ಸೆಂಚುರಿ, ರಾಜ್ಯಕ್ಕೆ 1 ವಿಕೆಟ್‌ ರೋಚಜ ಜಯ!

| Published : Dec 27 2024, 12:46 AM IST / Updated: Dec 27 2024, 04:09 AM IST

ಸಾರಾಂಶ

ರಾಷ್ಟ್ರೀಯ ಟೂರ್ನಿ. ಕರ್ನಾಟಕ ತಂಡಕ್ಕೆ ಹ್ಯಾಟ್ರಿಕ್‌ ಗೆಲುವು. ಅಭಿಲಾಶ್‌ ಶೆಟ್ಟಿಗೆ 5 ವಿಕೆಟ್‌. ಪಂಜಾಬ್‌ 247ಕ್ಕೆ ಆಲೌಟ್‌. 47.3 ಓವರ್‌ನಲ್ಲಿ ಗೆದ್ದ ಕರ್ನಾಟಕ. ಕೊನೆ ವಿಕೆಟ್‌ಗೆ 48 ರನ್‌ ಜೊತೆಯಾಟ.

ಅಹಮದಾಬಾದ್‌: ನಾಯಕ ಮಯಾಂಕ್‌ ಅಗರ್‌ವಾಲ್‌ ಹೋರಾಟದ ಶತಕ ಹಾಗೂ ಕೊನೆ ವಿಕೆಟ್‌ಗೆ ಕೌಶಿಕ್‌ ಜೊತೆಗೂಡಿ ಸೇರಿಸಿದ 48 ರನ್ ಕರ್ನಾಟಕ ತಂಡಕ್ಕೆ ಈ ಬಾರಿ ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ತಂದುಕೊಟ್ಟಿದೆ. ಗುರುವಾರ ಪಂಜಾಬ್‌ ವಿರುದ್ಧ ರಾಜ್ಯ ತಂಡ 1 ವಿಕೆಟ್‌ ರೋಚಕ ಗೆಲುವು ಸಾಧಿಸಿತು. 

ಇದರೊಂದಿಗೆ ‘ಸಿ’ ಗುಂಪಿನಲ್ಲಿ 3 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ 49.2 ಓವರ್‌ಗಳಲ್ಲಿ 247 ರನ್‌ಗೆ ಆಲೌಟಾಯಿತು. ಯುವ ಬೌಲರ್‌ ಅಭಿಲಾಶ್‌ ಶೆಟ್ಟಿ ದಾಳಿ ಮುಂದೆ ಪಂಜಾಬ್‌ಗೆ ಹೆಚ್ಚೇನೂ ಚಮತ್ಕಾರ ಮಾಡಲು ಸಾಧ್ಯವಾಗಲಿಲ್ಲ. ಅನ್ಮೋಲ್‌ಪ್ರೀತ್‌ ಸಿಗ್‌ 51, ಅನ್ಮೋಲ್ ಮಲ್ಹೋತ್ರ 42, ನೇಹಲ್‌ ವಧೇರಾ 37, ಸನ್ವೀರ್ ಸಿಂಗ್‌ 35 ರನ್‌ ಗಳಿಸಿದರು.

 ಅಭಿಲಾಶ್‌ 44 ರನ್‌ಗೆ 5 ವಿಕೆಟ್‌ ಕಿತ್ತರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜ್ಯ ತಂಡ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೆ ತುತ್ತಾಯಿತು. ಮಯಾಂಕ್ ಒನ್‌ ಮ್ಯಾನ್‌ ಶೋ ಎಂಬಂತೆ ಬ್ಯಾಟ್‌ ಬೀಸಿದರೆ, ಇತರರು ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ ಸೇರಿದರು. ಶ್ರೇಯಸ್‌ ಗೋಪಾಲ್‌ 29, ಅಭಿನವ್‌ ಮನೋಹರ್‌ 20ಕ್ಕೆ ಔಟಾದ ಬಳಿಕ ರಾಜ್ಯ ಒಂದು ಹಂತದಲ್ಲಿ 203 ರನ್‌ಗೆ 9 ವಿಕೆಟ್‌ ಕಳೆದುಕೊಂಡಿತ್ತು. 

ಆದರೆ ಕೊನೆ ವಿಕೆಟ್‌ಗೆ ಕೌಶಿಕ್(ಔಟಾಗದೆ 7) ಜೊತೆಗೂಡಿ 48 ರನ್‌ ಸೇರಿಸಿದ ಮಯಾಂಕ್‌ ತಂಡವನ್ನು ಗೆಲ್ಲಿಸಿದರು. ಆರಂಭಿಕನಾಗಿ ಕಣಕ್ಕಿಳಿದು ಕೊನೆವರೆಗೂ ಆಡಿದ ಮಯಾಂಕ್‌ 127 ಎಸೆತಗಳಲ್ಲಿ 17 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 139 ರನ್‌ ಸಿಡಿಸಿದರು. ಅಭಿಷೇಕ್‌ ಶರ್ಮಾ 4 ವಿಕೆಟ್‌ ಕಿತ್ತರು.ಸ್ಕೋರ್‌: ಪಂಜಾಬ್‌ 49.2 ಓವರಲ್ಲಿ 247/10 (ಅನ್ಮೋಲ್‌ಪ್ರೀತ್‌ 51, ಅನ್ಮೋಲ್‌ 42, ಅಭಿಲಾಶ್‌ 5-44), ಕರ್ನಾಟಕ 47.3 ಓವರಲ್ಲಿ 251/9 (ಮಯಾಂಕ್‌ ಔಟಾಗದೆ 139, ಶ್ರೇಯಸ್‌ 29, ಅಭಿಷೇಕ್‌ 4-56)

ಪಂದ್ಯಶ್ರೇಷ್ಠ: ಮಯಾಂಕ್‌ ಅಗರ್‌ವಾಲ್‌.