ಜಿಂಬಾಬ್ವೆ ವಿರುದ್ಧ ಸರಣಿ ಗೆಲುವಿಗೆ ಟೀಂ ಇಂಡಿಯಾ ಕಾತರ

| Published : Jul 13 2024, 01:32 AM IST / Updated: Jul 13 2024, 04:50 AM IST

ಸಾರಾಂಶ

5 ಪಂದ್ಯಗಳ ಸರಣಿಯ 4ನೇ ಟಿ20 ಇಂದು. 2-1ರಲ್ಲಿ ಮುನ್ನಡೆಯಲ್ಲಿರುವ ಟೀಂ ಇಂಡಿಯಾಕ್ಕೆ ಸರಣಿ ಜಯದ ಗುರಿ. ಸರಣಿ ಸಮಬಲಗೊಳಿಸಲು ಆತಿಥೇಯ ತಂಡ ಕಾತರ.

ಹರಾರೆ: ಕಳೆದೆರಡು ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಅಮೋಘ ಪ್ರದರ್ಶನ ತೋರಿರುವ ಯುವ ಆಟಗಾರರನ್ನೊಳಗೊಂಡ ಭಾರತ ತಂಡ ಸದ್ಯ ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದು, ಶನಿವಾರ ಸರಣಿಯ 4ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. 

ಶುಭ್‌ಮನ್‌ ಗಿಲ್‌ ನಾಯಕತ್ವದ ಭಾರತ ಸದ್ಯ 2-1 ಮುನ್ನಡೆಯಲ್ಲಿದೆ.ಆರಂಭಿಕ ಪಂದ್ಯದಲ್ಲಿ ಆಘಾತಕಾರಿ ಸೋಲು ಭಾರತೀಯರನ್ನು ಘಾಸಿಗೊಳಿಸಿತ್ತಾದರೂ ಬಳಿಕ ಪುಟಿದೆದ್ದಿದ್ದಾರೆ. ಆಲ್ರೌಂಡ್‌ ಪ್ರದರ್ಶನದ ಮೂಲಕ 2 ಪಂದ್ಯಗಳಲ್ಲಿ ಗೆಲುವನ್ನು ಒಲಿಸಿಕೊಂಡಿದ್ದಾರೆ.

2ನೇ ಪಂದ್ಯದಲ್ಲಿ ಆರಂಭಿಕನಾಗಿ ಅಬ್ಬರದ ಶತಕ ಸಿಡಿಸಿದ್ದ ಅಭಿಷೇಕ್‌ ಶರ್ಮಾ 3ನೇ ಕ್ರಮಾಂಕದಲ್ಲೂ ಅಮೋಘ ಆಟವಾಡಬೇಕಿದೆ. ಋತುರಾಜ್ ಗಾಯಕ್ವಾಡ್‌ ಉತ್ತಮ ಲಯದಲ್ಲಿದ್ದು, ನಾಯಕ ಶುಭ್‌ಮನ್‌ ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ರವೀಂದ್ರ ಜಡೇಜಾರ ಸ್ಥಾನ ತುಂಬಲು ಎದುರು ನೋಡುತ್ತಿರುವ ವಾಷಿಂಗ್ಟನ್‌ ಸುಂದರ್‌ ಮತ್ತೊಮ್ಮೆ ಅಭೂತಪೂರ್ವ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ. 

ಸರಣಿಯಲ್ಲಿ ಎರಡು ಪಂದ್ಯ ಮಾತ್ರ ಬಾಕಿ ಇರುವುದರಿಂದ ಸಂಜು ಸ್ಯಾಮ್ಸನ್‌ ಹಾಗೂ ಶಿವಂ ದುಬೆಗೆ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ.ಅತ್ತ ಜಿಂಬಾಬ್ವೆ ಸುಧಾರಿತ ಪ್ರದರ್ಶನ ನೀಡುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ನಿರೀಕ್ಷೆಯಲ್ಲಿದೆ.ಪಂದ್ಯ: ಸಂಜೆ 4.30ಕ್ಕೆ(ಭಾರತೀಯ ಕಾಲಮಾನ)ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌ ನೆಟ್ವರ್ಕ್‌, ಸೋನಿ ಲೈವ್‌.