ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ನಡುವೆ ಒಂದು ತಿಂಗಳಿನಿಂದ ನಡೆಯುತ್ತಿರುವ  ಸಂಘರ್ಷ ಇದೀಗ ಕಾಂಬೋಡಿಯಾದಲ್ಲಿನ ವಿಷ್ಣು ಪ್ರತಿಮೆಯನ್ನು ಬಲಿ ಪಡೆದಿದೆ.  ವಿವಾದಿತ ಪ್ರದೇಶದಲ್ಲಿ ಇರುವ, ಪ್ರಸಕ್ತ ಕಾಂಬೋಡಿಯಾ ಗಡಿಯೊಳಗೆ ಬರುವ 9 ಮೀಟರ್‌  ಎತ್ತರದ ವಿಷ್ಣು ವಿಗ್ರಹವನ್ನು ಥಾಯ್ಲೆಂಡ್‌ ಸೇನೆ  ಧ್ವಂಸಗೊಳಿಸಿದೆ.

 ನವದೆಹಲಿ: ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ನಡುವೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಗಡಿ ಸಂಘರ್ಷ ಇದೀಗ ಕಾಂಬೋಡಿಯಾದಲ್ಲಿನ ವಿಷ್ಣುವಿನ ಪ್ರತಿಮೆಯನ್ನು ಬಲಿ ಪಡೆದಿದೆ.

ಉಭಯ ದೇಶಗಳ ನಡುವಿನ ವಿವಾದಿತ ಪ್ರದೇಶ

ಉಭಯ ದೇಶಗಳ ನಡುವಿನ ವಿವಾದಿತ ಪ್ರದೇಶದಲ್ಲಿ ಇರುವ, ಪ್ರಸಕ್ತ ಕಾಂಬೋಡಿಯಾ ಗಡಿಯೊಳಗೆ ಬರುವ 9 ಮೀಟರ್‌ (ಸುಮಾರು 30 ಅಡಿ) ಎತ್ತರದ ವಿಷ್ಣುವಿನ ವಿಗ್ರಹವನ್ನು ಥಾಯ್ಲೆಂಡ್‌ ಸೇನೆ ಬುಲ್ಡೋಜರ್‌ ಬಳಸಿ ಧ್ವಂಸಗೊಳಿಸಿದೆ. ಈ ಕುರಿತ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಥಾಯ್ಲೆಂಡ್‌ ಸರ್ಕಾರದ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ಪ್ರದೇಶ ತನಗೆ ಸೇರಿದ್ದೆಂದು ವಾದಿಸುತ್ತಿರುವ ಥಾಯ್ಲೆಂಡ್‌

ಥಾಯ್ಲೆಂಡ್‌ ಗಡಿಯಿಂದ 100 ಕಿ.ಮೀ. ದೂರದಲ್ಲಿರುವ ಎನ್‌ ಸೆಸ್‌ ಪ್ರದೇಶದಲ್ಲಿ 2014ರಲ್ಲಿ ಕಾಂಬೋಡಿಯಾ ಸರ್ಕಾರ ಸಣ್ಣ ದೇಗುಲ ಮತ್ತು 9 ಮೀಟರ್‌ ಎತ್ತರದ ವಿಷ್ಣು ವಿಗ್ರಹವನ್ನು ಪ್ರತಿಷ್ಠಾಪಿಸಿತ್ತು. ಇದು ಇತ್ತೀಚಿನ ದಿನಗಳಲ್ಲಿ ಹಿಂದೂ ಮತ್ತು ಬೌದ್ಧರ ಪ್ರಮುಖ ಪ್ರಾರ್ಥನಾ ಸ್ಥಳವಾಗಿ ಹೊರಹೊಮ್ಮಿತ್ತು. ಆದರೆ ಈ ಪ್ರದೇಶ ತನಗೆ ಸೇರಿದ್ದೆಂದು ವಾದಿಸುತ್ತಿರುವ ಥಾಯ್ಲೆಂಡ್‌ ಸೇನೆ, ಬುಧವಾರ ಬುಲ್ಡೋಜರ್‌ ಸಮೇತ ಆಗಮಿಸಿ ವಿಗ್ರಹವನ್ನು ಧ್ವಂಸಗೊಳಿಸಿದೆ.