ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಕತ್ತಿ ಮಸೆಯುತ್ತಿರುವ ಬಾಂಗ್ಲಾದೇಶ ಇದೀಗ ಭಾರತದ ವಿರುದ್ಧ ವಿಮೋಚನೆ ಕ್ಯಾತೆ

| Published : Dec 18 2024, 12:46 AM IST / Updated: Dec 18 2024, 08:12 AM IST

ಸಾರಾಂಶ

ಈಗಾಗಲೇ ಭಾರತ ಹಾಗೂ ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಕತ್ತಿ ಮಸೆಯುತ್ತಿರುವ ಬಾಂಗ್ಲಾದೇಶ ಈಗ ಹೊಸ ಕ್ಯಾತೆ ಆರಂಭಿಸಿದೆ.

 ಢಾಕಾ: ಈಗಾಗಲೇ ಭಾರತ ಹಾಗೂ ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಕತ್ತಿ ಮಸೆಯುತ್ತಿರುವ ಬಾಂಗ್ಲಾದೇಶ ಈಗ ಹೊಸ ಕ್ಯಾತೆ ಆರಂಭಿಸಿದೆ. ‘ಭಾರತವು ಬಾಂಗ್ಲಾ ವಿಮೋಚನೆ ರೂವಾರಿ ಅಲ್ಲ, ಪಾಲುದಾರನಷ್ಟೇ’ ಎಂದು ಹೇಳಿದೆ.

1971ರಲ್ಲಿ ಪಾಕ್‌ ವಿರುದ್ಧ ನಡೆದ ಬಾಂಗ್ಲಾ ವಿಮೋಚನಾ ಯುದ್ಧದ ನೆನಪಾರ್ಥ ಡಿ.16ರಂದು ಆಚರಿಸಲಾಗುವ ವಿಜಯ ದಿವಸದ ಅಂಗವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿ, ‘ಭಾರತವು ಪಾಕ್‌ ವಿರುದ್ಧ ನಡೆದ ಈ ಯುದ್ಧದಲ್ಲಿ ಐತಿಹಾಸಿಕ ಜಯ ಕಂಡಿತ್ತು’ ಎಂದು ಸೋಮವಾರ ಹೇಳಿದ್ದರು.

ಆದರೆ ಮೋದಿ ಹೇಳಿಕೆಯನ್ನು ಬಾಂಗ್ಲಾದೇಶದ ಕಾನೂನು ಸಲಹೆಗಾರ ಆಸಿಫ್‌ ನಸ್ರುಲ್‌ ಅವರು ಫೇಸ್‌ಬುಕ್‌ನಲ್ಲಿ ಟೀಕಿಸಿದ್ದು, ‘ನಾನು ಇದನ್ನು ವಿರೋಧಿಸುತ್ತೇನೆ. 1971ರ ಡ.16ರಂದು ಗೆಲುವು ಸಾಧಿಸಿದ್ದು ಬಾಂಗ್ಲಾ ಮಾತ್ರ. ಈ ಜಯದಲ್ಲಿ ಭಾರತ ಪಾಲುದಾರನಷ್ಟೇ. ಹೆಚ್ಚೇನೂ ಇಲ್ಲ’ ಎಂದು ಬರೆದಿದ್ದಾರೆ.

ಇನ್ನು ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನದ ಸಂಯೋಜಕ ಹಸ್ನತ್‌ ಅಬ್ದುಲ್ಲಾ ಕೂಡ ಇದೇ ನಿಲುವನ್ನು ವ್ಯಕ್ತಪಡಿಸಿದ್ದು, ‘ಅಂದು ಪಾಕ್‌ ವಿರುದ್ಧ ಗೆದ್ದಿದ್ದು ನಾವು ಮಾತ್ರ. ಬಾಂಗ್ಲಾದ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಕೇವಲ ಭಾರತ ಸೆಣಸಿ ಗೆದ್ದಿತು ಎಂಬಂತೆ ಮೋದಿ ಬಿಂಬಿಸುತ್ತಿದ್ದಾರೆ. ಇದನ್ನು ನೋಡಿದಾಗ ನಮ್ಮ ಸ್ವಾತಂತ್ರ್ಯ, ಸಾರ್ವಭೌಮತ್ವ ಹಾಗೂ ಏಕತೆಗೆ ಭಾರತದಿಂದ ಅಪಾಯವಿದೆ ಎನಿಸುತ್ತಿದೆ’ ಎಂದಿದ್ದಾರೆ.