ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದಾಗಿ ಸಾವನ್ನಪ್ಪಿದ, ಆದರೆ ಇದುವರೆಗೆ ವಾರಸುದಾರರು ಸಿಗದ, ಗುರುತು ಪತ್ತೆಯಾಗದ ಮೃತದೇಹಗಳನ್ನು ಸಾಮೂಹಿಕ ಅಂತ್ಯಕ್ರಿಯೆ ಮಾಡಲು ನೇಪಾಳ ಸರ್ಕಾರ ನಿರ್ಧರಿಸಿದೆ.
ಕಾಠ್ಮಂಡು: ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದಾಗಿ ಸಾವನ್ನಪ್ಪಿದ, ಆದರೆ ಇದುವರೆಗೆ ವಾರಸುದಾರರು ಸಿಗದ, ಗುರುತು ಪತ್ತೆಯಾಗದ ಮೃತದೇಹಗಳನ್ನು ಸಾಮೂಹಿಕ ಅಂತ್ಯಕ್ರಿಯೆ ಮಾಡಲು ನೇಪಾಳ ಸರ್ಕಾರ ನಿರ್ಧರಿಸಿದೆ. ಸೋಂಕು ಹರಡುವ ಭೀತಿ ಮತ್ತು ಮೃತದೇಹಗಳು ಕೊಳೆಯುತ್ತಿರುವುದರಿಂದ ಸರ್ಕಾರ ಈ ಹೆಜ್ಜೆ ಇಟ್ಟಿದೆ.
ಅಂತ್ಯಕ್ರಿಯೆಗೆ ಕಾರಣ: ಶವಾಗಾರಗಳಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಶೇಖರಿಸಿಡಲಾಗಿದ್ದ ಮೃತದೇಹಗಳು ಕೊಳೆಯುತ್ತಿದ್ದು, ತೀವ್ರ ದುರ್ವಾಸನೆ ಬೀರುತ್ತಿದೆ. ಇದು ಸೋಂಕು ಹರಡುವ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಡಿಎನ್ಎ (DNA) ಸಂಗ್ರಹಣೆ: ಮೃತದೇಹಗಳನ್ನು ಹೂಳುವ ಮುನ್ನ ವೈದ್ಯರು ಅವುಗಳ ಡಿಎನ್ಎ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಭವಿಷ್ಯದಲ್ಲಿ ವಾರಸುದಾರರು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಪ್ರತಿಯೊಬ್ಬ ಮೃತದೇಹಕ್ಕೂ ಪ್ರತ್ಯೇಕ ಗುರುತಿನ ಸಂಖ್ಯೆ (ID) ಮತ್ತು ಸ್ಥಳದ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುತ್ತಿದೆ.
ವೈಜ್ಞಾನಿಕ ಅಂತ್ಯಕ್ರಿಯೆ:
ಭವಿಷ್ಯದಲ್ಲಿ ಅಗತ್ಯಬಿದ್ದರೆ ಮೃತದೇಹಗಳನ್ನು ಸುಲಭವಾಗಿ ಮರುಪಡೆಯಲು ಅನುಕೂಲವಾಗುವಂತೆ 1.5 ಮೀಟರ್ ಆಳದ ಗುಂಡಿ ತೋಡಿ ಅದರಲ್ಲಿ ಶವಗಳನ್ನು ಹೂಳಲಾಗುತ್ತಿದೆ. ಜೊತೆಗೆ ಮೃತದೇಹಗಳನ್ನು ವಿಶೇಷ ಚೀಲಗಳಲ್ಲಿ ಹಾಕಿ ಗುರುತಿನ ಸಂಖ್ಯೆ ನಮೂದಿಸಲಾಗುತ್ತಿದೆ. ಅಲ್ಲದೆ, ಪ್ರತಿ ಸಮಾಧಿ ಸ್ಥಳದ ಬಳಿ ನಂಬರ್ ಫಲಕವಿರುವ ಕಾಂಕ್ರೀಟ್ ವೇದಿಕೆಯನ್ನು ನಿರ್ಮಿಸಲಾಗುತ್ತಿದೆ.
ಜಿಯೋ-ಟ್ಯಾಗ್
ಅಂತ್ಯಕ್ರಿಯೆಯ ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊ ಹಾಗೂ ಫೋಟೋಗಳ ಮೂಲಕ ದಾಖಲಿಸಲಾಗುತ್ತಿದ್ದು, ಜಿಯೋ-ಟ್ಯಾಗ್ (Geo-tag) ಮಾಡಲಾಗುತ್ತಿದೆ.
ವಾರಸುದಾರರು ಪತ್ತೆ ಹಚ್ಚುವ ವಿಧಾನ: ಕಾಣೆಯಾದ ತಮ್ಮ ಸಂಬಂಧಿಕರನ್ನು ಹುಡುಕುತ್ತಿರುವವರು ಆಸ್ಪತ್ರೆಗಳಲ್ಲಿ ಡಿಎನ್ಎ ಮಾದರಿಗಳನ್ನು ನೀಡಬೇಕು. ಡಿಎನ್ಎ ವರದಿ ಹೊಂದಿಕೆಯಾದ ಬಳಿಕ ಆರೋಗ್ಯ ಇಲಾಖೆಯು ಸಂಬಂಧಪಟ್ಟ ಮೃತದೇಹದ ನಂಬರ್ ನೀಡುತ್ತದೆ. ಆ ನಂಬರ್ ಆಧರಿಸಿ ಪೊಲೀಸರು ನಿಖರವಾದ ಸಮಾಧಿ ಸ್ಥಳವನ್ನು ಪತ್ತೆ ಹಚ್ಚಿ, ಮೃತದೇಹವನ್ನು ಹೊರತೆಗೆದು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.
ಅಲ್ಲದೆ, ಗುರುತು ಸಿಗದ ಮತ್ತು ವಾರಸುದಾರರಿಲ್ಲದ ಮೃತದೇಹಗಳ ವಿವರಗಳನ್ನು ಪೊಲೀಸರು ಅಧಿಕೃತ ವೆಬ್ಸೈಟ್ನಲ್ಲಿಯೂ ಅಪ್ಲೋಡ್ ಮಾಡಿದ್ದಾರೆ.


