ಸಾರಾಂಶ
ರಷ್ಯಾದೊಂದಿಗೆ ನಡೆಯುತ್ತಿರುವ ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿ 2ನೇ ಶಾಂತಿ ಸಮ್ಮೇಳನ ಆಯೋಜನೆಗೆ ಕೈಜೋಡಿಸುವಂತೆ ಭಾರತ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಕರೆ ನೀಡಿದ್ದಾರೆ.
ವಿಶ್ವಸಂಸ್ಥೆ: ರಷ್ಯಾದೊಂದಿಗೆ ನಡೆಯುತ್ತಿರುವ ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿ 2ನೇ ಶಾಂತಿ ಸಮ್ಮೇಳನ ಆಯೋಜನೆಗೆ ಕೈಜೋಡಿಸುವಂತೆ ಭಾರತ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಕರೆ ನೀಡಿದ್ದಾರೆ.
ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ‘ರಷ್ಯಾದ ಯುದ್ಧ ಸ್ಥಗಿತಗೊಳಿಸಲು ಮತ್ತು ಶಾಂತಿಯುತ ಗೊತ್ತುವಳಿಯತ್ತ ಸಾಗಲು ಒಗ್ಗಟ್ಟಿನ ಪ್ರಯತ್ನದ ಅವಶ್ಯಕತೆ ಇದೆ. ನಾವು ಪರಿಸ್ಥಿತಿಯನ್ನು ಪ್ರಾಮಾಣಿಕವಾಗಿ ಪರಿಶೀಲಿಸಿದರೆ ಮತ್ತು ನಿಜವಾಗಿಯೂ ರಷ್ಯಾ ಯುದ್ಧವನ್ನು ನಿಲ್ಲಿಸಬೇಕು ಎಂದಾದಲ್ಲಿ ನಾವೇನು ಮಾಡಬೇಕಿದೆ ಎಂಬುದು ನಮಗೆಲ್ಲರಿಗೂ ಗೊತ್ತು. ಮುಖ್ಯವಾಗಿ ನಾವೆಲ್ಲಾ ಒಂದಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಅನಗತ್ಯ ಪ್ರಾಂತೀಯ ಪಂಗಡಗಳೆಂದು ಗುಂಪುಗಾರಿಕೆ ಮಾಡದೆ ಐಕ್ಯತೆ ತೋರಿಸಬೇಕು’ ಎಂದರು.
ಜೊತೆಗೆ, ‘ಯುದ್ಧವನ್ನು ನಿಲ್ಲಿಸಲು ನಾವು 2ನೇ ಶಾಂತಿ ಸಮ್ಮೇಳನ ಆಯೋಜಿಸಬೇಕಿದೆ. ಇದಕ್ಕೆ ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ. ಈ ಪ್ರಕ್ರಿಯೆಯಲ್ಲಿ ಪ್ರಮುಖ ದೇಶಗಳಿಗೆ ಕೈಜೋಡಿಸುವಂತೆ ಕರೆ ನೀಡುತ್ತೇನೆ. ಶೀಘ್ರ ಚೀನಾ, ಬ್ರೆಜಿಲ್ ಅನ್ನು ಆಹ್ವಾನಿಸುತ್ತೇನೆ. ಭಾರತಕ್ಕೆ ಈಗಾಗಲೇ ಆಹ್ವಾನ ನೀಡಿದ್ದೇನೆ. ಉಳಿದ ಆಫ್ರಿಕಾ, ಮಧ್ಯಪ್ರಾಚ್ಯ, ಮಧ್ಯ ಏಷ್ಯಾ, ಯುರೋಪ್, ಪೆಸಿಫಿಕ್ ದೇಶಗಳಿಗೂ ಈ ಕೆಲಸದಲ್ಲಿ ಕೈ ಜೋಡಿಸಲು ಮನವಿ ಮಾಡುತ್ತೇನೆ’ ಎಂದರು.