ಸಾರಾಂಶ
ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ಕೈಗೊಂಡ ಆಪರೇಷನ್ ಸಿಂದೂರದಲ್ಲಿ ಪಾಕಿಸ್ತಾನದ 150ಕ್ಕೂ ಅಧಿಕ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ರಹಸ್ಯ ಮಾಹಿತಿಯನ್ನು ಸ್ವತಃ ಪಾಕ್ನ ಸಮಾ ಟಿವಿ ಪ್ರಕಟಿಸಿದೆ.
ಇಸ್ಲಾಮಾಬಾದ್: ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ಕೈಗೊಂಡ ಆಪರೇಷನ್ ಸಿಂದೂರದಲ್ಲಿ ಪಾಕಿಸ್ತಾನದ 150ಕ್ಕೂ ಅಧಿಕ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ರಹಸ್ಯ ಮಾಹಿತಿಯನ್ನು ಸ್ವತಃ ಪಾಕ್ನ ಸಮಾ ಟಿವಿ ಪ್ರಕಟಿಸಿದೆ.
ದಾಳಿಯಿಂದ ತನಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನಕ್ಕೆ ಈ ವರದಿಯಿಂದ ತೀವ್ರ ಮುಜುಗರವುಂಟಾದ ಬೆನ್ನಲ್ಲೇ ವರದಿಯನ್ನು ಅಳಿಸಿಹಾಕಿದೆ. ಆದರೆ ಸುದ್ದಿಯ ಸ್ಕ್ರೀನ್ಶಾಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಆಪರೇಷನ್ ಸಿಂದೂರದಲ್ಲಿ ಸಾವನ್ನಪ್ಪಿದ ಸೈನಿಕರಿಗೆ ಪಾಕಿಸ್ತಾನದ ಸ್ವಾತಂತ್ರ್ಯ ದಿನವಾದ ಆ.14ರಂದು ಸರ್ಕಾರ ಪ್ರಶಸ್ತಿ ಪ್ರದಾನ ಮಾಡಿದೆ. ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ, ದಾಳಿಯಲ್ಲಿ ಮೃತಪಟ್ಟ ಒಟ್ಟು 155 ಸೈನಿಕರ ಹೆಸರನ್ನು ಉಲ್ಲೇಖಿಸಲಾಗಿದೆ. ಇಮ್ತಿಯಾಜಿ ಸನದ್, ತಮ್ಘಾ ಇ ಬಸಲತ್, ಸಿತಾರಾ-ಎ-ಬಸಲತ್, ತಮ್ಘಾ-ಎ-ಜುರಾತ್ ಮೊದಲಾದ ಪ್ರಶಸ್ತಿಗಳನ್ನು ಮರಣೋತ್ತರವಾಗಿ ಸೈನಿಕರಿಗೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಪ್ರದಾನ ಮಾಡಿದ್ದಾರೆ. ಈ ಪಟ್ಟಿ ಸಮಾ ಟಿವಿಯಲ್ಲಿ ಪ್ರಕಟವಾದ ಬೆನ್ನಲ್ಲೇ ಪಾಕಿಸ್ತಾನದ ಸೋಲು ಜಗಜ್ಜಾಹೀರಾಗಿದೆ.