ವೃದ್ಧೆಗೆ ಡಿಜಿಟಲ್‌ ಅರೆಸ್ಟ್‌ ಮಾಡಿ ಬರೋಬ್ಬರಿ 24 ಕೋಟಿ ರು. ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣದಲ್ಲಿ ಸೈಬರ್‌ ಕಮಾಂಡ್‌ ಸೆಂಟರ್‌ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಆರೋಪಿಗಳು ಇದೇ ರೀತಿ ಹಲವು ಸೈಬರ್‌ ವಂಚನೆ ಪ್ರಕರಣಗಳಲ್ಲಿಯೂ ಭಾಗಿಯಾಗಿರುವುದು ಪೊಲೀಸರ ತನಿಖೆಯ ವೇಳೆ ಪತ್ತೆಯಾಗಿದೆ.

ಬೆಂಗಳೂರು : ವೃದ್ಧೆಗೆ ಡಿಜಿಟಲ್‌ ಅರೆಸ್ಟ್‌ ಮಾಡಿ ಬರೋಬ್ಬರಿ 24 ಕೋಟಿ ರು. ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣದಲ್ಲಿ ಸೈಬರ್‌ ಕಮಾಂಡ್‌ ಸೆಂಟರ್‌ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಆರೋಪಿಗಳು ಇದೇ ರೀತಿ ಹಲವು ಸೈಬರ್‌ ವಂಚನೆ ಪ್ರಕರಣಗಳಲ್ಲಿಯೂ ಭಾಗಿಯಾಗಿರುವುದು ಪೊಲೀಸರ ತನಿಖೆಯ ವೇಳೆ ಪತ್ತೆಯಾಗಿದೆ.

ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ (74) ಎಂಬುವರಿಗೆ ಸೈಬರ್‌ ಕ್ರೈಂ ಮಾಡಿ ವಂಚಿಸಿದ್ದ ಆರೋಪದ ಮೇಲೆ ತಮಿಳುನಾಡು ಮೂಲದ ಎನ್‌.ಶಿವಗ್ನಾನಂ, ಮುಂಬೈನ ಅಕ್ಕಚ್‌ ಮಲ್ಲಿಕ್‌, ಅಹಮದಾಬಾದ್ ಮೂಲದ ಪಲಕ್‌ ಭಾಯಿ ಪಟೇಲ್, ಅಮಿತ್ ನರೇಂದ್ರ ಪಟೇಲ್, ಬಿಹಾರದ ಗೌರವ್ ಕುಮಾರ್ ಮತ್ತು ದೆಹಲಿಯ ಓಂ ಪ್ರಕಾಶ್ ರಜಪೂತ್‌ನನ್ನು ಬಂಧಿಸಲಾಗಿತ್ತು.

24 ಕೋಟಿ ರು. ವಂಚಿಸಿದ್ದರು:

2026ರ ಫೆ.10ರಿಂದ ಏ.24ರವರೆಗೆ ಲಕ್ಷ್ಮೀ ರಾಮಮೂರ್ತಿ ಅವರನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 24 ಕೋಟಿ ರು. ಸುಲಿಗೆ ಮಾಡಿದ್ದರು. ಬಂಧಿತ ಆರೋಪಿಗಳ ಖಾತೆಯಲ್ಲಿದ್ದ 4 ಕೋಟಿ ರು.ಫ್ರೀಜ್ ಮಾಡಲಾಗಿತ್ತು. ನಂತರ ಕೋರ್ಟ್‌ ಆದೇಶದ ಮೇರೆಗೆ 1.45 ಕೋಟಿ ರು.ವಾಪಸ್ ಪಡೆಯಲಾಗಿತ್ತು. ಇದೀಗ ಆರೋಪಿಗಳಿಂದ ಮತ್ತೆ 1.46 ಕೋಟಿ ಹಣವನ್ನು ವಶಪಡಿಸಿಕೊಳ್ಳುವುದರಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿವರಗಳನ್ನು ಬೆಳಗಾವಿ ಸೈಬರ್‌ ಕ್ರೈಂ ಪೊಲೀಸರಿಗೆ ತಿಳಿಸಲಾಗಿದೆ

ಬಂಧಿತ ಆರೋಪಿಗಳ ಪೈಕಿ ಗುಜರಾತ್‌ ಮೂಲದ ಪಲಕ್‌ ಭಾಯಿ ಪಟೇಲ್‌ ಮತ್ತು ಅಮೀತ್‌ ನರೇಂದ್ರ ಪಾಟೀಲ್‌, ಬೆಳಗಾವಿ ನಗರದ ಸೈಬರ್‌ ಕ್ರೈಂ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ (ಸಿಸಿಪಿಎಸ್‌) ನಡೆದಿದ್ದ 15 ಕೋಟಿಯ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣದಲ್ಲೂ ಭಾಗಿಯಾಗಿರುವುದು ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ. ಈ ಆರೋಪಿಗಳ ವಿವರಗಳನ್ನು ಬೆಳಗಾವಿ ಸೈಬರ್‌ ಕ್ರೈಂ ಪೊಲೀಸರಿಗೆ ತಿಳಿಸಲಾಗಿದ್ದು, ಅವರು ಬಾಡಿ ವಾರಂಟ್ ಮೇಲೆ ಆರೋಪಿಗಳನ್ನು ಪಡೆದುಕೊಂಡಿದ್ದು, ಸದ್ಯ ಆರೋಪಿಗಳು ಬೆಳಗಾವಿ ಸೈಬರ್‌ ಕ್ರೈಂ ಪೊಲೀಸರ ವಶದಲ್ಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ತಮಿಳುನಾಡಿನ ಈರೋಡ್‌ ಮೂಲದ ಆರೋಪಿಯಾದ ಎನ್‌.ಶಿವಗ್ನಾನಂ ಕೂಡ 4 ಸೈಬರ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಹಾಗೆಯೇ ಮುಂಬೈ ಮೂಲದ ಆರೋಪಿ ಅಚ್ಚಕ್‌ ಮಲ್ಲಿಕ್‌ ಕೂಡ 3 ಸೈಬರ್ ವಂಚನೆ ಕೇಸಲ್ಲಿ ಭಾಗಿ ಆಗಿರುವುದು ತಿಳಿದುಬಂದಿದೆ. ಆರೋಪಿಗಳಿಂದ 1.46 ಕೋಟಿ ರು. ಹೆಚ್ಚುವರಿ ಹಣವನ್ನು ವಶಪಡಿಸಿಕೊಳ್ಳುವುದರ ಜತೆಗೆ, ಇನ್ನೂ 1.40 ಕೋಟಿ ರು. ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.