ಕಾರು ಡಿಕ್ಕಿ: ಮಳವಳ್ಳಿಯ ನಿವೃತ್ತ ಯೋಧ ಸಾವು

| Published : Oct 09 2025, 02:00 AM IST

ಸಾರಾಂಶ

ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕಿನ ಹೆಗ್ಗೂರು ಗೇಟ್ ಬಳಿಯ ಮಳವಳ್ಳಿ-ಮೈಸೂರು ಮುಖ್ಯರಸ್ತೆಯಲ್ಲಿ ಬುಧವಾರ ನಡೆದಿದೆ. ಚಿಕ್ಕಮಾಳಿಗೆಕೊಪ್ಪಲು ಗ್ರಾಮದ ನಿವೃತ್ತ ಯೋಧ ಸಿ.ಟಿ.ವೆಂಕಟೇಶ್ ಸ್ಥಳದಲ್ಲಿಯೇ ಮೃತಪಟ್ಟವರು.

ಮಳವಳ್ಳಿ: ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಗ್ಗೂರು ಗೇಟ್ ಬಳಿಯ ಮಳವಳ್ಳಿ-ಮೈಸೂರು ಮುಖ್ಯರಸ್ತೆಯಲ್ಲಿ ಬುಧವಾರ ನಡೆದಿದೆ.

ತಾಲೂಕಿನ ಚಿಕ್ಕಮಾಳಿಗೆಕೊಪ್ಪಲು ಗ್ರಾಮದ ನಿವೃತ್ತ ಯೋಧ ಸಿ.ಟಿ.ವೆಂಕಟೇಶ್(64) ಸ್ಥಳದಲ್ಲಿಯೇ ಮೃತಪಟ್ಟವರು. ಬುಧವಾರ ಮಧ್ಯಾಹ್ನ ಸಿ.ಟಿ.ವೆಂಕಟೇಶ್ ತಮ್ಮ ಬೈಕ್ ನಲ್ಲಿ ಹೆಗ್ಗೂರು ಗೇಟ್ ಬಳಿಯ ಗದ್ದೆಗೆ ತೆರಳುತ್ತಿದ್ದ ವೇಳೆ ಮಳವಳ್ಳಿ -ಮೈಸೂರು ರಸ್ತೆಯಲ್ಲಿ ಕಾರು ಡಿಕ್ಕಿಯಾಗಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕಿರುಗಾವಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಗೊರವಾಲೆ ಬಳಿ ಹುಲಿ ಪ್ರತ್ಯಕ್ಷ.!, ವ್ಯಕ್ತಿ ಮೇಲೆ ದಾಳಿ

ಮಂಡ್ಯ:

ತೋಟದಲ್ಲಿ ಸೊಪ್ಪು ಕೀಳುವ ವೇಳೆ ವ್ಯಕ್ತಿ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ತಾಲೂಕಿನ ಗೊರವಾಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತಿರುಮಲೆ (60) ಹುಲಿ ದಾಳಿಯಿಂದ ಬಲ ತೊಡೆ ಮತ್ತು ಬಲಗೈಗೆ ಗಂಭೀರ ಗಾಯವಾಗಿದೆ. ಹುಲಿ ದಾಳಿ ವೇಳೆ ಕೈಯಲ್ಲಿದ್ದ ಕುಡುಗೋಲಿನಿಂದ ಪ್ರತಿದಾಳಿ ನಡೆಸಿ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿದಾಗ ಹುಲಿ ಅರಣ್ಯಕ್ಕೆ ಪರಾರಿಯಾಗಿದೆ ಎಂದು ಹೇಳಲಾಗಿದೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಮೂಡಿದೆ.

ಗೊಂದಲದಲ್ಲಿ ಅಧಿಕಾರಿಗಳು:

ಗೊರವಾಲೆ ಅರಣ್ಯ ಪ್ರದೇಶದಲ್ಲಿ ಹುಲಿ ಸಂತತಿ ಇಲ್ಲ. ವ್ಯಕ್ತಿ ಮೇಲೆ ದಾಳಿ ಮಾಡಿದ್ದು ಹುಲಿಯೋ ಅಥವಾ ಚಿರತೆಯೋ ಎಂಬ ಗೊಂದಲದಲ್ಲಿ ಅಧಿಕಾರಿಗಳಿದ್ದಾರೆ. ಆದರೆ, ಗ್ರಾಮಸ್ಥರು ಹುಲಿಯನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿದ್ದಾರೆ.

ಗಾಯಾಳು ತಿರುಮಲ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಗಾಯಾಳುವಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.ಅಪರಿಚಿತ ವ್ಯಕ್ತಿ ಶವ ಪತ್ತೆಮಂಡ್ಯ: ತಾಲೂಕಿನ ಹನಕೆರೆ - ಮಂಡ್ಯ ರೈಲು ನಿಲ್ದಾಣಗಳ ಮಧ್ಯೆ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ ಎಂದು ಮೈಸೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ಗಂಡಸಿಗೆ ಸುಮಾರು 50-55 ವರ್ಷವಾಗಿದೆ. 5.6 ಅಡಿ ಎತ್ತರ, ಸಾಧರಣ ಶರೀರ, ಗೋಧಿ ಮೈಬಣ್ಣ, ದುಂಡನೆ ಮುಖ, ದಪ್ಪನೆಯ ಮೂಗು, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು-ಬಿಳಿ ಮಿಶ್ರಿತ ಕೂದಲು, ಕಪ್ಪು - ಬಿಳಿ ಮಿಶ್ರಿತ ಗಡ್ಡ-ಮೀಸೆ ಹೊಂದಿರುತ್ತಾನೆ. ಸಿಮೆಂಟ್ ಕಪ್ಪು ಮಿಶ್ರಿತ ಕೆಂಪು ಗೆರೆ ಇರುವ ಫುಲ್ ಸ್ವೆಟರ್, ಬಿಳಿ ಬಣ್ಣದ ಅರ್ಧ ತೋಳಿನ ಬನಿಯನ್, ಕೆಂಪು ಉಡದಾರ, ನೀಲಿ ಬಣ್ಣದ ಅಂಡರ್ ವೇರ್, ಬಲಗೈಯಲ್ಲಿ ಕೆಂಪುದಾರ ಮಣಿಗಳು ಧರಿಸಿರುತ್ತಾನೆ. ವಾರಸುದಾರರಿದ್ದಲ್ಲಿ ದೂ.-0821-2516579, ಮೊ-9480802122 ಅನ್ನು ಸಂಪರ್ಕಿಸಲು ಮೈಸೂರು ರೈಲ್ವೆ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.