ಕನ್ನಡಪ್ರಭ ವಾರ್ತೆ ಬೆಂಗಳೂರು

ತನಗೆ ಹೇಳದೆ ಬೈಕ್ ತೆಗೆದುಕೊಂಡು ಹೋಗಿದ್ದರಿಂದ ಮದ್ಯದ ಅಮಲಿನಲ್ಲಿ ಸಿಟ್ಟಿಗೆದ್ದು ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಂದೆ ಕೊಲೆಗೆ ಯತ್ನಿಸಿದ್ದು, ಈ ವೇಳೆ ತಂದೆಗೂ ಸಹ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಗತಿಪುರ ನಿವಾಸಿಗಳಾದ ಮಲ್ಲಿಕಾರ್ಜುನ್‌ (19) ಹಾಗೂ ಆತನ ತಂದೆ ಆನಂದ್‌ ದೊಡ್ಡಮನಿ (45) ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಶೇ.40 ರಷ್ಟು ಸುಟ್ಟು ಗಾಯವಾಗಿರುವ ಮಲ್ಲಿಕಾರ್ಜುನ್ ಪರಿಸ್ಥಿತಿ ಗಂಭೀರವಾಗಿದೆ. ಆನಂದ್ ಅವರಿಗೆ ಶೇ.18 ರಷ್ಟು ಸುಟ್ಟು ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆನಂದ್ ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಟೈಲ್ಸ್‌ ಕೆಲಸ ಮಾಡುತ್ತಿದ್ದರು. ಬೆವರು ಸುರಿಸಿ ದುಡಿದು ಅವರು ಜೀವನ ಸಾಗಿಸುತ್ತಿದ್ದರು. ಆದರೆ ಪ್ರತಿ ದಿನ ಸಣ್ಣಪುಟ್ಟ ಕಾರಣಗಳಿಗೆ ಮನೆಯಲ್ಲಿ ಕುಡಿದ ಮತ್ತಿನಲ್ಲಿ ಮಕ್ಕಳ ಜತೆ ಆನಂದ್ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.


ಕಾರ್ಮಿಕ ದಿನಾಚರಣೆ ನಿಮಿತ್ತ ಕೆಲಸಕ್ಕೆ ಬಿಡುವಿದ್ದ ಕಾರಣ ತಂದೆ-ಮಕ್ಕಳು ಮನೆಯಲ್ಲಿದ್ದರು. ಸಂಜೆ ತನ್ನ ತಂದೆಯ ಬೈಕ್ ಅನ್ನು ತೆಗೆದುಕೊಂಡು ಹೊರ ಹೋಗಿದ್ದ ಮಲ್ಲಿಕಾರ್ಜುನ್ ರಾತ್ರಿ ಮನೆಗೆ ಮರಳಿದ್ದಾನೆ. ಆಗ ತನಗೆ ಹೇಳದೆ ಬೈಕ್ ಯಾಕೆ ತೆಗೆದುಕೊಂಡು ಹೋಗಿದ್ದೆ ಎಂದು ಮಗನನ್ನು ಆನಂದ್ ಪ್ರಶ್ನಿಸಿದ್ದಾನೆ. ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆನಂದ್‌, ಬಾಟಲ್‌ನಲ್ಲಿದ್ದ ಪೆಟ್ರೋಲ್ ತೆಗೆದು ಮಗನ ಮೇಲೆ ಎರಚಿ ಬೆಂಕಿ ಹಚ್ಚಿದ್ದಾನೆ. ಅದೇ ಹೊತ್ತಿಗೆ ಅವರ ಪಕ್ಕದ ಮನೆಯವರು ಹೊರಗೆ ಅಡುಗೆ ಮಾಡುತ್ತಿದ್ದರಿಂದ ಸೌದೆ ಒಲೆಗೆ ಪೆಟ್ರೋಲ್ ಬಿದ್ದು ಧಗ್ಗನೆ ಬೆಂಕಿ ಹೊತ್ತಿಕೊಂಡಿದೆ. ಈ ಕಿಡಿ ಆನಂದ್‌ಗೂ ತಾಕಿದೆ. ಕೂಡಲೇ ತಂದೆ-ಮಗನ ರಕ್ಷಣೆಗೆ ಸ್ಥಳೀಯರು ಧಾವಿಸಿದ್ದಾರೆ. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ತಂದೆ-ಮಗನನ್ನು ಸ್ಥಳೀಯರು ದಾಖಲಿಸಿದ್ದಾರೆ.

ಮನೆಯಲ್ಲಿದ್ದ ಪೆಟ್ರೋಲ್‌ ಬಳಕೆ:

ಮನೆಯಿಂದ ಯಾರು ಬೈಕ್ ತೆಗೆದುಕೊಂಡು ಹೋಗುತ್ತಾರೆ ಅವರೇ ಪೆಟ್ರೋಲ್ ಹಾಕಿಸಬೇಕು ಎಂಬ ನಿಯಮವನ್ನು ಆನಂದ್ ಹಾಗೂ ಆತನ ಮಕ್ಕಳು ಪಾಲಿಸುತ್ತಿದ್ದರು. ಅಂತೆಯೇ ಮನೆಯಿಂದ ಹೊರಟವರು ಬೈಕ್‌ಗೆ ಪೆಟ್ರೋಲ್ ಹಾಕಿಸಿ ಮನೆಗೆ ಮರಳಿದ ಕೂಡಲೇ ಆ ಪೆಟ್ರೋಲ್ ಅನ್ನು ಬಾಟಲ್‌ನಲ್ಲಿ ತುಂಬಿಡುತ್ತಿದ್ದರು. ನಂತರ ಯಾರು ಬೈಕ್ ಬಳಸುತ್ತಾರೆ ಅವರು ಬಂಕ್‌ಗೆ ಹೋಗಿ ಪೆಟ್ರೋಲ್ ಹಾಕಿಸಿ ಓಡಿಸಬೇಕಿತ್ತು. ಹೀಗಾಗಿ ಮನೆಯಲ್ಲಿ ಬಾಟಲ್‌ನಲ್ಲಿದ್ದ ಪೆಟ್ರೋಲ್ ಅನ್ನೇ ಮಗನ ಮೇಲೆ ಆನಂದ್ ಎರಚಿದ್ದರು ಎಂದು ಪೊಲೀಸರು ಹೇಳಿದ್ದಾರೆ.