ಸಾರಾಂಶ
ಆಟ ಆಡುವಾಗ ಪುತ್ರಿಗೆ ಹೊಡೆದ ಎಂಬ ಕ್ಷುಲ್ಲಕ ಕಾರಣಕ್ಕೆ ನೆರೆ ಮನೆಯ 8 ವರ್ಷದ ಬಾಲಕನ ಕತ್ತು ಹಿಸುಕಿ ಕೊಲೆಗೈದು ಬಳಿಕ ಮೃತದೇಹವನ್ನು ಕೆರೆಯ ಕೆಸರಿನಲ್ಲಿ ಹೂತು ಹಾಕಿರುವ ಅಮಾನುಷ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು : ಆಟ ಆಡುವಾಗ ಪುತ್ರಿಗೆ ಹೊಡೆದ ಎಂಬ ಕ್ಷುಲ್ಲಕ ಕಾರಣಕ್ಕೆ ನೆರೆ ಮನೆಯ 8 ವರ್ಷದ ಬಾಲಕನ ಕತ್ತು ಹಿಸುಕಿ ಕೊಲೆಗೈದು ಬಳಿಕ ಮೃತದೇಹವನ್ನು ಕೆರೆಯ ಕೆಸರಿನಲ್ಲಿ ಹೂತು ಹಾಕಿರುವ ಅಮಾನುಷ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ನಾತೂನ್ ಸಹಾನಿ ಅವರ ಪುತ್ರ ರಮಾನಂದ (8) ಹತ್ಯೆಯಾದ ಬಾಲಕ. ಮೇ 6ರಂದು ರಾತ್ರಿ ರಾಯಸಂದ್ರ ಕೆರೆ ಸಮೀಪ ಈ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಬಿಹಾರ ಮೂಲದ ಸೆಕ್ಯೂರಿಟಿ ಗಾರ್ಡ್ ಆರೋಪಿ ಚಂದೇಶ್ವರ್ ಮತುರ್ (36) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನದು ಘಟನೆ?:
ಬಿಹಾರ ಮೂಲದ ನಾತೂನ್ ಸಹಾನಿ ಮತ್ತು ಆರೋಪಿ ಚಂದೇಶ್ವರ್ ಕುಟುಂಬ ಸಮೇತ ಕಳೆದ ಆರೇಳು ವರ್ಷಗಳ ಹಿಂದೆಯೇ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದು, ರಾಯಸಂದ್ರದಲ್ಲಿ ಅಕ್ಕಪಕ್ಕದ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಇಬ್ಬರು ಖಾಸಗಿ ಕಂಪನಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಾರೆ. ಇವರ ಪತ್ನಿಯರು ಅಪಾರ್ಟ್ಮೆಂಟ್ಗಳಲ್ಲಿ ಅಡುಗೆ ಕೆಲಸ ಮಾಡುತ್ತಾರೆ. ನಾತೂನ್ ಸಹಾನಿ ಪುತ್ರ ರಮಾನಂದ ಮತ್ತು ಚಂದೇಶ್ವರ್ ಪುತ್ರಿ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದರು.
ಎರಡೂ ಕುಟುಂಬಗಳ ನಡುವೆ ಜಗಳ:
ರಮಾನಂದ ಮತ್ತು ಆರೋಪಿ ಪುತ್ರಿ ಮನೆ ಬಳಿ ಒಟ್ಟಿಗೆ ಆಟ ಆಡುತ್ತಿದ್ದರು. ಕೆಲವು ವೇಳೆ ಜಗಳವಾಡುತ್ತಿದ್ದರು. ಈ ಸಂದರ್ಭದಲ್ಲಿ ರಮಾನಂದ, ಆರೋಪಿಯ ಪುತ್ರಿಗೆ ಹೊಡೆಯುತ್ತಿದ್ದ. ಆರೋಪಿಯ ಮನೆಯ ಟಿವಿ ರಿಮೋಟ್ ಸಹ ಹೊಡೆದು ಹಾಕಿದ್ದ. ಮಕ್ಕಳ ಜಗಳದ ವಿಚಾರಕ್ಕೆ ಎರಡೂ ಕುಟುಂಬಗಳ ನಡುವೆ ಹಲವು ಬಾರಿ ಜಗಳವಾಗಿತ್ತು. ಇತ್ತೀಚೆಗೆ ಮಕ್ಕಳ ವಿಚಾರಕ್ಕೆ ನಡೆದ ಜಗಳದ ವೇಳೆ ರಮಾನಂದನ ತಾಯಿ ಆರೋಪಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಹೀಗಾಗಿ ಆರೋಪಿ ಚಂದೇಶ್ವರ್ ಕೋಪಗೊಂಡು ನಾತೂನ್ ಸಹನಾನಿ ಕುಟುಂಬದ ವಿರುದ್ಧ ದ್ವೇಷ ಸಾಧಿಸುತ್ತಿದ್ದ.
ವಿಚಾರಣೆ ವೇಳೆ ತಪ್ಪೊಪ್ಪಿಗೆ:
ರಮಾನಂದನ ಪತ್ತೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ರಮಾನಂದನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದ ನೆರೆ ಮನೆಯ ಚಂದೇಶ್ವರ್ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆರಂಭದಲ್ಲಿ ನನಗೇನು ಗೊತ್ತಿಲ್ಲ ಎಂದಿದ್ದಾನೆ. ಬಳಿಕ ಆತನ ವರ್ತನೆಯಲ್ಲಿ ಬದಲಾವಣೆ ಕಂಡು ತಮ್ಮದೇ ಶೈಲಿಯಲ್ಲಿ ತೀವ್ರ ವಿಚಾರಣೆ ಮಾಡಿದಾಗ ರಮಾನಂದನ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮೃತದೇಹವನ್ನು ರಾಯಸಂದ್ರ ಕೆರೆಯ ಕೆಸರಿನಲ್ಲಿ ಹೂತಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಕೆಸರಿನಿಂದ ಹೊರೆಗೆ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಚಂದೇಶ್ವರ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆರೆ ಬಳಿ ಕರೆದೊಯ್ದು ಕೊಲೆ ಮಾಡಿ ಕಾಲಿನಿಂದ ತುಳಿದ
ಮೇ 6ರಂದು ಸಂಜೆ ಆರೋಪಿ ಚಂದೇಶ್ವರ್ ಕೆಲಸದಿಂದ ಮನೆಗೆ ಬಂದಿದ್ದಾನೆ. ಬಳಿಕ ಮನೆ ಇದ್ದ ರಮಾನಂದನನ್ನು ರಾಯಚಂದ್ರದ ಕೆರೆ ಬಳಿಗೆ ಕರೆದೊಯ್ದು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಕೆರೆಯ ಕೆಸರಿನೊಳಗೆ ಹಾಕಿ ಕಾಲಿನಿಂದ ತುಳಿದು ಹೂತುಹಾಕಿ ಮನೆಗೆ ಬಂದಿದ್ದಾನೆ. ಮತ್ತೊಂದೆಡೆ ಮನೆ ಬಳಿ ರಮಾನಂದ ಕಾಣಿಸದಿರುವುದರಿಂದ ಪೋಷಕರು ಆತಂಕಗೊಂಡು ಎಲ್ಲ ಕಡೆ ಹುಡುಕಾಡಿದ್ದಾರೆ. ಮಾರನೇ ದಿನ ಪೊಲೀಸ್ ಠಾಣೆಗೆ ತೆರಳಿ ಪುತ್ರ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು.