ಬೆಳಗಾವಿ ಕೇಸ್‌ ದ್ರೌಪದಿ ವಸ್ತ್ರಾಪಹರಣಕ್ಕಿಂತ ಕ್ರೂರ: ಹೈಕೋರ್ಟ್‌ ಕಿಡಿ

| Published : Dec 15 2023, 01:31 AM IST

ಬೆಳಗಾವಿ ಕೇಸ್‌ ದ್ರೌಪದಿ ವಸ್ತ್ರಾಪಹರಣಕ್ಕಿಂತ ಕ್ರೂರ: ಹೈಕೋರ್ಟ್‌ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

‘ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಮೃಗೀಯ ವ್ಯಕ್ತಿಗಳು ಮಧ್ಯರಾತ್ರಿ ಮನೆಯಿಂದ ಎಳೆದು ತಂದು ಎರಡು ಗಂಟೆಗಳ ಕಾಲ ಹಿಂಸಿಸಿದ್ದಾರೆ. ಅವರನ್ನು ಮನುಷ್ಯರು ಎನ್ನಲು ನಾಚಿಕೆಯಾಗುತ್ತದೆ: ಹೈಕೋರ್ಟ್‌ ಕಿಡಿ

- ಇದು ದುರ್ಯೋಧನ, ದುಶ್ಶಾಸನರ ಕಾಲ । ಇಲ್ಲಿ ಕೃಷ್ಣ ಪರಮಾತ್ಮ ಇಲ್ಲ

- ಇಂಥವರನ್ನು ಮನುಷ್ಯರು ಎನ್ನಲೂ ನಾಚಿಕೆ । ತಲೆ ತಗ್ಗಿಸುವ ಘಟನೆ ಇದು

- ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿದವರಿಗೆ ಪ್ರಹಾರ । 18ಕ್ಕೆ ವರದಿಗೆ ಸೂಚನೆಕನ್ನಡಪ್ರಭ ವಾರ್ತೆ ಬೆಂಗಳೂರು

‘ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಮೃಗೀಯ ವ್ಯಕ್ತಿಗಳು ಮಧ್ಯರಾತ್ರಿ ಮನೆಯಿಂದ ಎಳೆದು ತಂದು ಎರಡು ಗಂಟೆಗಳ ಕಾಲ ಹಿಂಸಿಸಿದ್ದಾರೆ. ಅವರನ್ನು ಮನುಷ್ಯರು ಎನ್ನಲು ನಾಚಿಕೆಯಾಗುತ್ತದೆ. ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕಿಂತಲೂ ಇದು ಕ್ರೂರ ಕೃತ್ಯ. ಅಲ್ಲಿ ದ್ರೌಪದಿಗೆ ಶ್ರೀಕೃಷ್ಣ ಪರಮಾತ್ಮ ಸಹಾಯ ಮಾಡಿದ್ದ. ಇದು ದುರ್ಯೋಧನ ಮತ್ತು ದುಶ್ಶಾಸನರ ಜಗತ್ತು. ಇಲ್ಲಿ ಸಹಾಯಕ್ಕೆ ಯಾರೂ ಇಲ್ಲ.’

ಹೀಗಂತ ಬೆಳಗಾವಿ ಮಹಿಳೆ ವಿವಸ್ತ್ರ ಘಟನೆ ಬಗ್ಗೆ ಹೈಕೋರ್ಟ್ ಆಕ್ರೋಶ ಹಾಗೂ ಬೇಸರ ವ್ಯಕ್ತಪಡಿಸಿದೆ.

ಘಟನೆ ಕುರಿತು ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಸ್ವಾತಂತ್ರ್ಯದ ಬಂದು 75 ವಷರ್ಗಳ ನಂತರವೂ ಇಂತಹ ದುರ್ಘಟನೆ ನಡೆದಿರುವುದಕ್ಕೆ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ ಎಂದರು.

ಪೊಲೀಸರು, ಆಯೋಗಗಳಿಗೆ ತರಾಟೆ:

ಅಲ್ಲದೆ, ಈ ಘಟನೆ ನಡೆಯಲು ಅವಕಾಶ ನೀಡಿದ್ದೇಕೆ? ಅಲ್ಲಿ ಪೊಲೀಸ್‌ ಗಸ್ತು ಇರಲಿಲ್ಲವೇ? ಪೊಲೀಸರ ಕೆಲಸ ತನಿಖೆ ಮಾಡುವುದಷ್ಟೇ ಅಲ್ಲ, ಘಟನೆಯನ್ನೂ ತಡೆಯುವುದೂ ಸಹ. ತಪ್ಪಿತಸ್ಥ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಏನು ಕ್ರಮಕೈಗೊಳ್ಳಲಾಗಿದೆ? ರಾಜ್ಯದಲ್ಲಿ ಮಹಿಳಾ ಆಯೋಗ ಹಾಗೂ ಮಾನವ ಹಕ್ಕು ಆಯೋಗ ಏನು ಮಾಡುತ್ತಿವೆ? ಯಾತನೆಯಿಂದ ಹೊರಬರಲು ಸಂತ್ರಸ್ತೆಗೆ ಏಕೆ ಮನೋವೈಜ್ಞಾನಿಕ ಕೌನ್ಸಿಲಿಂಗ್‌ ನಡೆಸಿಲ್ಲ? ಎಂದು ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿತು. ಜತೆಗೆ, ಘಟನೆ ಕುರಿತು ಡಿ.18ರಂದು ಸರ್ಕಾರ ಹೆಚ್ಚುವರಿ ಸ್ಥಿತಿಗತಿ ವರದಿ ಸಲ್ಲಿಸಬೇಕು. ತನಿಖಾಧಿಕಾರಿಯಾದ ಎಸಿಪಿ ಜೊತೆಗೆ ಬೆಳಗಾವಿ ಪೊಲೀಸ್ ಆಯುಕ್ತರು ವಿಚಾರಣೆಗೆ ಹಾಜರಾಗಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.ವಿಚಾರಣೆ ಆರಂಬಿಸುತ್ತಿದ್ದಂತೆಯೇ ಸಂತ್ರಸ್ತೆಯ ಮೇಲೆ ನಡೆದ ದೌರ್ಜನ್ಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ನ್ಯಾಯಾಲಯ ಈ ಸಂದರ್ಭದಲ್ಲಿ ತಕ್ಷಣ ಪೊಲೀಸರು ಸಂತ್ರಸ್ತೆಯ ನೆರವಿಗೆ ಏಕೆ ಧಾವಿಸಲಿಲ್ಲ. ಬೆಳಗಿನ ಜಾವ 3.30ಕ್ಕೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅಸಮಧಾನ ಹೊರಹಾಕಿತು. ನ್ಯಾಯಮೂರ್ತಿ ದೀಕ್ಷಿತ್‌ ಅವರು, ಯತ್ರ ನಾರ್ಯಂತು ಪೂಜ್ಯಂತೆ, ರಮಂತೇ ತತ್ರ ದೇವತ ಎಂಬ ಮಂತ್ರವಿದ್ದರೂ ಪ್ರಯೋಜನವೇನು? ಈ ಘಟನೆಯಿಂದ ಗ್ರಾಮದಲ್ಲಿನ ಇತರೆ ಮಹಿಳೆಯರಿಗೆ ಏನನ್ನಿಸಲಿದೆ? ಸೂಕ್ಷ್ಮಮತಿಯಾದ ಮಹಿಳೆಗೆ ಸಹಜವಾಗಿ ಭಯ ಸೃಷ್ಟಿಯಾಗಲಿದೆ. ಆಕೆ ಈ ದೇಶವನ್ನು ದ್ವೇಷಿಸಲಾರಂಭಿಸಬಹುದು. ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣದ ವೇಳೆಯೂ ಇಂತಹ ಕ್ರೂರ ಕೃತ್ಯ ನಡೆದಿರಲಿಲ್ಲ. ಬಡವರ ಮೇಲೆಯೇ ಈ ರೀತಿಯ ಕೃತ್ಯ ನಡೆಯುತ್ತದೆ. ವಾಸ್ತವವಾಗಿ ಯಾರ ಮೇಲೂ ಇಂತಹ ಘಟನೆ ನಡೆಯಬಾರದು ಎಂದು ಬೇಸರ ವ್ಯಕ್ತಪಡಿಸಿದರು.

ಅದಕ್ಕೆ ಧ್ವನಿಗೂಡಿಸಿದ ಮುಖ್ಯ ನ್ಯಾಯಮೂರ್ತಿ ವರಾಳೆ ಅವರು, ಅದೃಷ್ಟವಶಾತ್‌ ಮಹಾಭಾರತದಲ್ಲಿ ದ್ರೌಪದಿ ಸಹಾಯಕ್ಕಾಗಿ ಅಂಗಲಾಚಿದಾಗ ಕೃಷ್ಣ ಸಹಾಯ ಮಾಡಿದ್ದ. ದುರದೃಷ್ಟವಶಾತ್‌ ಇದು ದುರ್ಯೋಧನ ಮತ್ತು ದುಶ್ಯಾಸನರ ಜಗತ್ತು. ಬಡ ದ್ರೌಪದಿಗೆ (ಸಂತ್ರಸ್ತೆಗೆ) ಸಹಾಯಲು ಒಬ್ಬೇ ಒಬ್ಬ ಶ್ರೀಕೃಷ್ಣ ಪರಮಾತ್ಮ ಸಹಾಯಕ್ಕೆ ಬರುವುದಿಲ್ಲ. ಈ ಘಟನೆಯು ಪುರುಷ ಪ್ರಧಾನ ವ್ಯವಸ್ಥೆ ಎಷ್ಟು ಆಳವಾಗಿದೆ ಎಂಬುದನ್ನು ತೋರಿಸುತ್ತದೆ. ನಮಗೆ ಮಾತೇ ಹೊರಡದಂತಾಗಿದೆ. ಇದು ಎಲ್ಲರಿಗೂ ನಾಚಿಕೆಗೇಡಿನ ವಿಚಾರ ಎಂದು ನುಡಿದು ಒಂದು ಕ್ಷಣ ಮೌನಕ್ಕೆ ಜಾರಿದರು.

ವಿಚಾರಣೆ ವೇಳೆ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು, ಪ್ರಕರಣ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸಿ, ತನಿಖೆಯನ್ನು ಎಸಿಸಿಗೆ ವಹಿಸಲಾಗಿದೆ. ಒಂದು ವಾರ ಕಾಲಾವಕಾಶ ನೀಡಿದರೆ ಹೆಚ್ಚುವರಿ ಮಾಹಿತಿ ನೀಡಲಾಗುವುದು ಎಂದು ಕೋರಿದರು.

ಅದಕ್ಕೆ ನ್ಯಾಯಪೀಠ, ಘಟನೆ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ಸ್ಥಿತಿಗತಿ ವರದಿ ತೃಪ್ತಿ ತಂದಿಲ್ಲ. ವರದಿಯಲ್ಲಿ ಸಂತ್ರಸ್ತ ಮಹಿಳೆಗೆ ಮನೋವೈಜ್ಞಾನಿಕ ಕೌನ್ಸೆಲಿಂಗ್ ಹಾಗೂ ಆಕೆಗೆ ಚಿಕಿತ್ಸೆ ನೀಡಿರುವ ಬಗ್ಗೆ ಮಾಹಿತಿ ನೀಡಿಲ್ಲ. ಆದ್ದರಿಂದ ಡಿ.18ರೊಳಗೆ ಹೆಚ್ಚುವರಿ ಸ್ಥಿತಿಗತಿ ವರದಿ ಸಲ್ಲಿಸಬೇಕು. ಮುಂದಿನ ವಿಚಾರಣೆ ವೇಳೆಗೆ ತನಿಖಾಧಿಕಾರಿಯಾದ ಎಸಿಪಿ ಜೊತೆಗೆ ಬೆಳಗಾವಿ ಪೊಲೀಸ್ ಆಯುಕ್ತರು ವಿಚಾರಣೆಗೆ ಖುದ್ದು ಹಾಜರಿರಬೇಕು ಎಂದು ಸೂಚಿಸಿತು.