ಕುಟುಂಬ ಕಲಹದಿಂದ ಬೇಸತ್ತು ವಿಚ್ಛೇದನ ಪಡೆದು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದ ಪತ್ನಿಯನ್ನು ಕೊಲೆ ಮಾಡಿದ್ದ ಅಪರಾಧಿಗೆ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಂಡ್ಯ: ಕುಟುಂಬ ಕಲಹದಿಂದ ಬೇಸತ್ತು ವಿಚ್ಛೇದನ ಪಡೆದು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದ ಪತ್ನಿಯನ್ನು ಕೊಲೆ ಮಾಡಿದ್ದ ಅಪರಾಧಿಗೆ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತಾಲೂಕಿನ ರಾಗಿಮುದ್ದನಹಳ್ಳಿಯ ಕುಳ್ಳವೆಂಕಟಯ್ಯ ಪುತ್ರ ಸುರೇಶ್ ಶಿಕ್ಷೆಗೆ ಗುರಿಯಾದವನು. ಕಳೆದ 18 ವರ್ಷಗಳ ಹಿಂದೆ ಸುರೇಶ್ ಶಾಲಿನಿ ಎಂಬುವವರನ್ನು ಮದುವೆಯಾಗಿದ್ದನು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಸುರೇಶನ ವರ್ತನೆಯಿಂದ ಬೇಸತ್ತ ಶಾಲಿನಿ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ವಾಸವಾಗಿದ್ದರು.

ಪೋಕ್ಸ್ ಪ್ರಕರಣ ದಾಖಲಾಗಿತ್ತು

ಅಪರಾಧಿ ಸುರೇಶ್ ವಿರುದ್ಧ ಅಪ್ರಾಪ್ತೆ ಮೇಲಿನ ಅತ್ಯಾ*ರ ನಡೆಸಿದ ಆರೋಪದ ಮೇಲೆ ಪೋಕ್ಸ್ ಪ್ರಕರಣ ದಾಖಲಾಗಿತ್ತು. ನಂತರ ದಿನಗಳಲ್ಲಿ ಸುರೇಶ್ ಶಾಲಿನಿಯೊಂದಿಗೆ ಜೀವನ ನಡೆಸಲು ಮುಂದಾದಾಗ ಇದಕ್ಕೆ ಪತ್ನಿ ಒಪ್ಪಿರಲಿಲ್ಲ. ಮಕ್ಕಳೊಂದಿಗೆ ಮಾತನಾಡಲು ಬಿಡುತ್ತಿರಲಿಲ್ಲ. ಇದರಿಂದ ಕೋಪಗೊಂಡು ಶಾಲಿನಿಗೆ ಕೊಲೆ ಬೆದರಿಕೆಯನ್ನು ಹಾಕಿದ್ದನು.

ಕೊಡಲಿಯಿಂದ ತಲೆ, ಕುತ್ತಿಗೆಗೆ ಹಲ್ಲೆ

2022ರ ಜ.20 ರಂದು ಶಾಲಿನಿ ಪ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ಊರಿಗೆ ವಾಪಸ್ ನಡೆದುಕೊಂಡು ಬರುತ್ತಿದ್ದ ವೇಳೆ ರಾಗಿಮುದ್ದನಹಳ್ಳಿ ಸಮೀಪದ ಜಮೀನಿನ ಬಳಿ ಸುರೇಶ್ ಗಲಾಟೆ ಮಾಡಿ ಕೊಡಲಿಯಿಂದ ತಲೆ, ಕುತ್ತಿಗೆಗೆ ಹಲ್ಲೆ ಮಾಡಿ ಅಮಾನುಷವಾಗಿ ಕತ್ತು ಕತ್ತರಿಸಿ ಶಿರಚ್ಛೇಧನ ಮಾಡಿದ್ದನು.

ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಸುರೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಾಕ್ಷಿ ಸಮೇತ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಸೈಯದ್ ಉನ್ನಿಸಾ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸುರೇಶನಿಗೆ ಕಲಂ 302 ಜೀವಾವಧಿ ಶಿಕ್ಷೆ, 50 ಸಾವಿರ ದಂಡ, ಕಲಂ 201ರ ಅಡಿ 5 ವರ್ಷಗಳ ಸೆರೆಮನೆ ವಾಸ, 25 ಸಾವಿರ ದಂಡ, ಕಲಂ 341ರ ಅಡಿ ಅಪರಾಧಕ್ಕೆ 1 ತಿಂಗಳ ಸೆರೆಮನೆ ವಾಸ, 500 ರು.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಮೃತಳ ಇಬ್ಬರು ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ನೀಡಲು ನಿರ್ದೇಶಿಸಿದ್ದಾರೆ. ಆರೋಪಿ ವಿರುದ್ಧ ಸರ್ಕಾರಿ ಅಭಿಯೋಜಕ ಎನ್.ಬಿ.ವಿಜಯಲಕ್ಷ್ಮಿ, ಕೆ.ನಾಗರಾಜ ವಾದ ಮಂಡಿಸಿದ್ದರು.