ಸಾರಾಂಶ
ಬಾರ್ನಲ್ಲಿ ನಿಧಾನವಾಗಿ ಮಾತನಾಡುವಂತೆ ಹೇಳಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಮನೆಯಲ್ಲಿಯೇ ಪತ್ನಿ ಎದುರಿಗೆ ಚಾಕು ಇರಿದು ಕೊಲೆ
ಬೆಂಗಳೂರು ದಕ್ಷಿಣ : ಬಾರ್ನಲ್ಲಿ ನಿಧಾನವಾಗಿ ಮಾತನಾಡುವಂತೆ ಹೇಳಿದ್ದ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಹೋಗಿ ಆತನ ಮನೆಯಲ್ಲಿಯೇ ಪತ್ನಿ ಎದುರಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಗಯ್ಯನದೊಡ್ಡಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕೆಂಚಗಾಯ್ಯನದೊಡ್ಡಿ ನಿವಾಸಿ ಸುರೇಶ್ (30) ಕೊಲೆಯಾದ ದುರ್ದೈವಿ. ಕಾಂತರಾಜು ಎನ್ನುವ ವ್ಯಕ್ತಿಯ ತಂಡದವರಿಂದ ಹತ್ಯೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆ ವಿವರ:
ಸುರೇಶ್ ಗ್ಯಾರೇಜ್ವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಏ.25ರ ರಾತ್ರಿ ಮದ್ಯ ಸೇವಿಸಲು ಸ್ನೇಹಿತರ ಜೊತೆ ಶ್ಯಾನುಭೋಗನಹಳ್ಳಿ ತರಂಗಿಣಿ ಬಾರ್ಗೆ ತೆರಳಿದ್ದರು. ಇದೇ ಬಾರ್ನ ಮತ್ತೊಂದು ಟೆಬಲ್ನಲ್ಲಿ ಆರೋಪಿ ಕಾಂತರಾಜು ಮತ್ತವರ ತಂಡ ಜೋರಾಗಿ ಮಾತನಾಡುತ್ತಾ ಮದ್ಯಸೇವನೆ ಮಾಡುತ್ತಿದ್ದರು. ಆಗ ಸುರೇಶ್ ಎದ್ದು ಹೋಗಿ ನಿಧಾನವಾಗಿ ಮಾತನಾಡಿ ಎಂದು ಹೇಳಿದ್ದಾನೆ. ಈ ವೇಳೆ ಕಾಂತರಾಜು ತಂಡ ಮತ್ತು ಸುರೇಶ್ ತಂಡದ ನಡುವೆ ತಳ್ಳಾಟ ನೂಕಾಟ ನಡೆದಿದೆ. ಇದಾದ ಬಳಿಕ ಬಾರ್ನಿಂದ ಸುರೇಶ್ ಮನೆಗೆ ತೆರಳಿದ್ದಾರೆ. ಸುರೇಶ್ನನ್ನೇ ಹಿಂಬಾಲಿಸಿದ ಕಾಂತರಾಜು ತಂಡ ಅವರ ಮನೆಗೆ ನುಗ್ಗಿ ಪತ್ನಿ ಮುಂದೆಯೇ ಹಲ್ಲೆ ಮಾಡಿ ಹೊಟ್ಟೆ ಮತ್ತು ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸುರೇಶ್ನನ್ನು ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಕುಮಾರ್, ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ಬನ್ನೇರುಘಟ್ಟ ಇನ್ಸ್ಪೇಕ್ಟರ್ ಕೃಷ್ಣ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.