ನಕಲಿ ನೇಮಕಾತಿ ಆದೇಶ ಸೃಷ್ಟಿಸಿದ ಪ್ರಕರಣ : ಆರೋಪಿ ನೆರವಾಗಿದ್ದ ಇಬ್ಬರು ಪೇದೆಗಳ ಅಮಾನತು

| N/A | Published : Apr 11 2025, 12:37 AM IST / Updated: Apr 11 2025, 04:27 AM IST

ನಕಲಿ ನೇಮಕಾತಿ ಆದೇಶ ಸೃಷ್ಟಿಸಿದ ಪ್ರಕರಣ : ಆರೋಪಿ ನೆರವಾಗಿದ್ದ ಇಬ್ಬರು ಪೇದೆಗಳ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ನಕಲಿ ನೇಮಕಾತಿ ಆದೇಶ ಸೃಷ್ಟಿಸಿದ ಪ್ರಕರಣದಲ್ಲಿ ಆರೋಪಿ ವೆಂಕಟೇಶ್‌ಗೆ ನೆರವಾಗಿದ್ದ ಇಬ್ಬರು ಪೇದೆಗಳನ್ನು ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರು ಅಮಾನತುಗೊಳಿಸಿದ್ದಾರೆ.

  ಮಂಡ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಹಿಯನ್ನೇ ನಕಲು ಮಾಡಿ ನಕಲಿ ನೇಮಕಾತಿ ಆದೇಶ ಸೃಷ್ಟಿಸಿದ ಪ್ರಕರಣದಲ್ಲಿ ಆರೋಪಿ ವೆಂಕಟೇಶ್‌ಗೆ ನೆರವಾಗಿದ್ದ ಇಬ್ಬರು ಪೇದೆಗಳನ್ನು ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರು ಅಮಾನತುಗೊಳಿಸಿದ್ದಾರೆ.

ಪೊಲೀಸ್ ಅಪರಾಧ ವಿಭಾಗದ ಪೇದೆಗಳಾದ ಲೋಕೇಶ್ ಮತ್ತು ಚಿಕ್ಕಯ್ಯ ಅಮಾನತುಗೊಂಡ ಪೇದೆಗಳು. ವಂಚನೆ ಪ್ರಕರಣ ಗೊತ್ತಿದ್ದರೂ ಅದನ್ನು ಮುಚ್ಚಿಟ್ಟು ಆರೋಪಿಯ ರಕ್ಷಣೆಗೆ ನಿಂತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕರ್ತವ್ಯಲೋಪವೆಸಗಿದ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ನಕಲಿ ನೇಮಕಾತಿ ಆದೇಶ ಪತ್ರ ಸೃಷ್ಟಿಸಿ ವಂಚಿಸಿದ್ದ ಪ್ರಕರಣದಲ್ಲಿ ಮಂಡ್ಯ ತಾವರೆಗೆರೆ ನಿವಾಸಿ ಎಚ್.ಸಿ.ವೆಂಕಟೇಶ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ಸಂಗತಿ ಬಯಲಾಗಿದೆ. ವೆಂಕಟೇಶ್ ಮೊಬೈಲ್ ಕರೆಗಳನ್ನು ತಪಾಸಣೆ ಮಾಡಿದಾಗ ಹಲವಾರು ಬಾರಿ ಲೋಕೇಶ್ ಮತ್ತು ಚಿಕ್ಕಯ್ಯ ಅವರಿಗೆ ಕರೆ ಮಾಡಿರುವುದು ಬಯಲಾಗಿದೆ. ಲೋಕೇಶ್ ಎಂಬ ಪೇದೆ ಆರೋಪಿ ವೆಂಕಟೇಶ್ ಸಂಬಂಧಿ ಎನ್ನುವುದು ಗೊತ್ತಾಗಿದೆ. ಚಿಕ್ಕಯ್ಯ ಹಲವಾರು ವರ್ಷಗಳಿಂದ ಅಪರಾಧ ವಿಭಾಗದಲ್ಲೇ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.

ಆರೋಪಿ ವೆಂಕಟೇಶ್ ವಿರುದ್ಧ ದೂರು ನೀಡಲು ಬರುವವರನ್ನೂ ಈ ಇಬ್ಬರು ಪೊಲೀಸ್ ಪೇದೆಗಳು ಸಮಾಧಾನ ಮಾಡಿ ಕಳುಹಿಸುತ್ತಿದ್ದರು. ಆ ಮೂಲಕ ಆರೋಪಿ ವಂಚನೆ ಮಾಡುವುದಕ್ಕೆ ಸಾಥ್ ನೀಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಮಂಡ್ಯ ಗಾಂಧಿನಗರದ ನೇತ್ರಾವತಿ ಹಾಗೂ ಕಲ್ಲಹಳ್ಳಿಯ ಮಲ್ಲೇಶ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಚ್.ಸಿ.ವೆಂಕಟೇಶ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಆತನ ಹೆಸರಿನಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಎಚ್.ಸಿ.ವೆಂಕಟೇಶ್ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳ ಖಾತೆಗಳನ್ನು ಬಂದ್ ಮಾಡಲಾಗಿದೆ. ಈತನ ವಿರುದ್ಧ ಮಂಡ್ಯದಲ್ಲಿ ನಾಲ್ಕು ಪ್ರಕರಣ, ಬೆಂಗಳೂರಿನಲ್ಲಿ ಒಂದು ಪ್ರಕರಣ ಸೇರಿ ಐದು ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ.

ಎಚ್.ಸಿ.ವೆಂಕಟೇಶ್ ಬೆಂಗಳೂರಿನ ವಿಧಾನಸೌಧದಲ್ಲಿ ಕೆಲಸದಲ್ಲಿರುವುದಾಗಿ ನಂಬಿಸಿ ಒಬ್ಬರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕೆಲಸ ಕೊಡಿಸುವುದಾಗಿ ೧೨.೨೪ ಲಕ್ಷ ರು. ಹಾಗೂ ವಾಣಿಜ್ಯ ಇಲಾಖೆಯಲ್ಲಿ ಹಿರಿಯ ಅಧಿಕಾರಿ ಕೆಲಸ ಕೊಡಿಸುವುದಾಗಿ ಇನ್ನೊಬ್ಬರಿಂದ ೧೯ ಲಕ್ಷ ರು. ಪಡೆದು ವಂಚಿಸಿರುವುದು ಬೆಳಕಿಗೆ ಬಂದಿತ್ತು.

ಸರ್ಕಾರದ ಅಧೀನ ಕಾರ್ಯದರ್ಶಿರವರ ಸಹಿ, ಸ್ಥಳ ನಿಯೋಜನೆ ಸಂಬಂಧ ಅದಿಕೃತ ಅದೇಶ ಪ್ರತಿ, ಜಿಲ್ಲಾದಿಕಾರಿಗಳ ಪರವಾಗಿ ಎಂದು ಸಹಿ ಇರುವ ಕಂದಾಯ ಇಲಾಖೆಯ ಪತ್ರ, ಹಿರಿಯ ಲೆಕ್ಕಾಧಿಕಾರಿಗಳ ಸಹಿ ಇರುವ ಪತ್ರ, ಸಿಎಂ ಸಿದ್ದರಾಮಯ್ಯರವರ ಸಹಿ ಇರುವ ಟಿಪ್ಪಣಿ, ಮಹಾ ನಿರ್ದೇಶಕರ ಪರವಾಗಿ ಎಂದು ಸಹಿ ಇರುವ ಪತ್ರಗಳನ್ನು ಸೃಷ್ಟಿಸಿದ್ದನು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಎಲ್ಲಾ ದಾಖಲೆಗಳನ್ನು ತೋರಿಸಿದಾಗ ಅವೆಲ್ಲಾ ಸುಳ್ಳು ದಾಖಲೆಗಳೆಂಬುದು ತಿಳಿದು ಎಚ್.ಸಿ.ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.ನಕಲಿ ಸರ್ಕಾರಿ ನೇಮಕಾತಿ ಆದೇಶ ಪತ್ರ ನೀಡಿ ವಂಚಿಸಿದ್ದ ಪ್ರಕರಣದಲ್ಲಿ ಆರೋಪಿ ಎಚ್.ಸಿ.ವೆಂಕಟೇಶ್‌ಗೆ ನೆರವಾಗಿದ್ದ ಚಿಕ್ಕಯ್ಯ ಮತ್ತು ಲೋಕೇಶ್ ಅವರನ್ನು ಅಮಾನತುಗೊಳಿಸಲಾಗಿದೆ. ವೆಂಕಟೇಶ್ ಮೊಬೈಲ್ ಪರಿಶೀಲಿಸಿದಾಗ ಹಲವಾರು ಬಾರಿ ಇವರಿಗೆ ಕರೆ ಮಾಡಿರುವುದು ಕಂಡುಬಂದಿದೆ. ವಂಚನೆ ಪ್ರಕರಣ ಗೊತ್ತಿದ್ದು ಮುಚ್ಚಿಟ್ಟು ಕರ್ತವ್ಯಲೋಪವೆಸಗಿದ ಹಿನ್ನೆಲೆಯಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

- ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರಕ್ಷಕ ಅಧೀಕ್ಷಕರು