ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೊರ ರಾಜ್ಯಗಳಲ್ಲಿ ಕದ್ದ ಕಾರುಗಳಿಗೆ ಸಾರಿಗೆ ಇಲಾಖೆ ಹಾಗೂ ಬ್ಯಾಂಕ್ಗಳ ನಕಲಿ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್ಓಸಿ) ಸೃಷ್ಟಿಸಿ ಜನರಿಗೆ ಕದ್ದ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಬಂಧಿಸಿದೆ.ಫ್ರೇಜರ್ ಟೌನ್ನ ರಿಯಾಜ್ ಹಾಗೂ ಗೋವಾದ ಆಸ್ಟಿನ್ ಕಾರ್ಡೋಸ್ ಬಂಧಿತರಾಗಿದ್ದು, ಆರೋಪಿಗಳಿಂದ ರೇಂಜ್ ರೋವರ್ ಹಾಗೂ ಜಾಗ್ವಾರ್ ಸೇರಿದಂತೆ ₹2.56 ಕೋಟಿ ಮೌಲ್ಯದ 17 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಗರದಲ್ಲಿ ನಕಲಿ ಎನ್ಓಸಿ ಸೃಷ್ಟಿಸಿ ಕಾರು ಮಾರಾಟ ಮಾಡುವ ಜಾಲ ಸಕ್ರಿಯವಾಗಿರುವ ಬಗ್ಗೆ ಸಿಸಿಬಿಯ ಸಂಘಟಿತ ಅಪರಾಧ ದಳ (ಪಶ್ಚಿಮ) ಇನ್ಸ್ಪೆಕ್ಟರ್ ಮಹದೇವಸ್ವಾಮಿ ಅವರಿಗೆ ಮಾಹಿತಿ ಸಿಕ್ಕಿತು. ಈ ಸುಳಿವು ಬೆನ್ನಹತ್ತಿದ್ದಾಗ ರಿಯಾಜ್ ಹಾಗೂ ಆಸ್ಟಿನ್ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಮತ್ತೆ ಕೆಲವರ ಪತ್ತೆಗೆ ಸಿಸಿಬಿ ತನಿಖೆ ಮುಂದುವರೆಸಿದೆ.
ಹೇಗೆ ವಂಚನೆ?:ರಿಯಾಜ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ನಗರದ ವಿವಿಧ ಠಾಣೆಗಳಲ್ಲಿ ಆತನ ಮೇಲೆ ಪ್ರಕರಣಗಳು ದಾಖಲಾಗಿವೆ. ಹಲವು ದಿನಗಳಿಂದ ಕಳವು ಕಾರುಗಳ ಮಾರಾಟ ದಂಧೆಯಲ್ಲಿ ರಿಯಾಜ್ ಸಕ್ರಿಯವಾಗಿದ್ದ. ಹಣದಾಸೆಗೆ ಆತನಿಗೆ ಗೋವಾದ ಆಸ್ಟಿನ್ ಸೇರಿದಂತೆ ಇತರರು ಸಾಥ್ ಕೊಟ್ಟಿದ್ದರು. ಕೆಲವು ತಿಂಗಳ ಹಿಂದೆ ವಿಧಾನಪರಿಷತ್ ಜೆಡಿಎಸ್ ಸದಸ್ಯ ಬೋಜೇಗೌಡ ಅವರ ಕಾರು ನೋಂದಣಿ ಸಂಖ್ಯೆ ಬಳಸಿ ಬೇರೋಂದು ವಾಹನ ಮಾರಾಟ ಯತ್ನಿಸಿದ್ದಾಗ ರಿಯಾಜ್ನನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಬಂದು ಆತ ಮತ್ತೆ ತನ್ನ ಚಾಳಿ ಮುಂದುವರೆಸಿದ್ದಾನೆ.
ಹೊರ ರಾಜ್ಯಗಳಿಂದ ಕಾರುಗಳನ್ನು ಕಳ್ಳತನ ಮಾಡಿ ಅವುಗಳನ್ನು ನಗರಕ್ಕೆ ರಿಯಾಜ್ ತಂಡ ತಂದ ಬಳಿಕ ಆ ಕಾರುಗಳಿಗೆ ಅದೇ ಮಾದರಿಯ ಬೇರೆ ನೋಂದಣಿ ನಂಬರ್ಗಳನ್ನು ಹಾಕಿ ಆ ನಂಬರ್ಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಹಾಗೆಯೇ ಬ್ಯಾಂಕ್ ಸಾಲ ಉಳಿಸಿಕೊಂಡಿರುವ ಕಾರುಗಳನ್ನು ಅಡಮಾನವಿಟ್ಟು ನಂತರ ಅವುಗಳಿಗೆ ಸಹ ನಕಲಿ ಬ್ಯಾಂಕ್ ಎನ್ಒಸಿ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.ಜಾಗ್ವಾರ್ ಮಾರಾಟ
ಕೆಲ ದಿನಗಳ ಹಿಂದೆ ರಿಯಾಜ್ಗೆ ತುರ್ತು ಹಣದ ಅವಶ್ಯಕತೆ ಇದ್ದ ಕಾರಣ ತಮ್ಮ ಜಾಗ್ವಾರ್ ಕಾರು ಮಾರಾಟ ಮಾಡಿಸಿ ಕೊಡುವಂತೆ ಆತನ ಪರಿಚಿತರೊಬ್ಬರು ಕೇಳಿದ್ದರು. ಆಗ ಅವರ ಜಾಗ್ವಾರ್ ಕಾರಿಗೆ ನಕಲಿ ದಾಖಲೆ ಸೃಷ್ಟಿಸಿ ಆತ ಮಾರಾಟ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.