ಸಾರಾಂಶ
ಹಾವೇರಿ : ಗ್ಯಾಂಗ್ ರೇಪ್ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗಿದ್ದಕ್ಕೆ ಹಾವೇರಿಯಿಂದ ಅಕ್ಕಿಆಲೂರಿನವರೆಗೆ ರೋಡ್ ಶೋ ನಡೆಸಿದ ಪ್ರಕರಣದಲ್ಲಿ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಎಲ್ಲ ಏಳು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಅಫ್ತಾಬ್ ಚಂದನಕಟ್ಟಿ, ಮದರ್ ಸಾಬ್ ಮಂಡಕ್ಕಿ, ಸಮೀವುಲ್ಲಾ ಲಾಲನವರ್, ಮಹಮ್ಮದ್ ಸಾದಿಕ್ ಅಗಸಿಮನಿ, ಶೋಯಿಬ್ ಮುಲ್ಲಾ, ರಿಯಾಜ್ ಸಾವಿಕೇರಿ ಹಾಗೂ ತೌಸಿಫ್ ಚೋಟಿ ಬಂಧಿತರು. ರೋಡ್ ಶೋನಲ್ಲಿ ಬಳಸಿದ್ದ ಎರಡು ಕಾರುಗಳನ್ನು ಹಾನಗಲ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಜಾಮೀನು ರದ್ದುಪಡಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ಎಎಸ್ಪಿ ಲಕ್ಷ್ಮಣ ಶಿರಕೋಳ ತಿಳಿಸಿದ್ದಾರೆ.
ಮುತಾಲಿಕ್ ಕಿಡಿ:
ಕ್ರಿಮಿನಲ್ಗಳು ಬೇಲ್ ಸಿಕ್ಕ ತಕ್ಷಣ ಮೆರವಣಿಗೆ ಮಾಡ್ತಾರೆ ಎಂದರೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರಿಗೆ ಅಪರಾಧ ಪಶ್ಚಾತ್ತಾಪದ ಮನೋಭಾವನೆಯೂ ಇಲ್ಲ. ನಾವು ಏನ್ ಮಾಡಿದರೂ ಯಾರೂ ಏನು ಮಾಡಲ್ಲ ಅನ್ನೋ ಸಂದೇಶ ಕೊಟ್ಟಿದ್ದಾರೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.