ಸಾರಾಂಶ
ತನ್ನ ತಂದೆ ಪಾಸ್ಪೋರ್ಟ್ ಬಳಸಿಕೊಂಡು ವಿದೇಶಕ್ಕೆ ತೆರಲು ಯತ್ನಿಸಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತನ್ನ ತಂದೆ ಪಾಸ್ಪೋರ್ಟ್ ಬಳಸಿಕೊಂಡು ವಿದೇಶಕ್ಕೆ ತೆರಲು ಯತ್ನಿಸಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ಟೆಕ್ಕಿ ಶ್ರೇಯಸ್ ರಮಾನಂದ್ ಬಂಧಿತನಾಗಿದ್ದು, ಕೆಐಎನಿಂದ ಕಜಖಿಸ್ತಾನ್ನ ಅಲ್ಮಟಿಗೆ ಪ್ರವಾಸಕ್ಕೆ ತೆರಳಲು ಯತ್ನಿಸಿದ್ದಾಗ ಪಾಸ್ಪೋರ್ಟ್ ಪರಿಶೀಲನೆ ವೇಳೆ ಆತನ ವಂಚನೆ ಕೃತ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಐಎನಿಂದ ದೆಹಲಿಗೆ ತೆರಳಿ ಅಲ್ಲಿಂದ ಅಲ್ಮಟಿಗೆ ಹೋಗಲು ಶ್ರೇಯಸ್ ರಮಾನಂದ್ ಬಂದಿದ್ದ. ಆಗ ಆತನ ಪಾಸ್ ಪೋರ್ಟ್ ಅನ್ನು ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಪರಿಶೀಲಿಸಿದಾಗ ಪಾಸ್ ಪೋರ್ಟ್ನಲ್ಲಿರುವ ಭಾವಚಿತ್ರಕ್ಕೂ ಶ್ರೇಯಸ್ಗೂ ವ್ಯತ್ಯಾಸ ಕಂಡು ಬಂದಿದೆ. ಕೂಲಂಕಷವಾಗಿ ಪರಿಶೀಲಿಸಿದಾಗ ನಕಲಿ ಪಾಸ್ಪೋರ್ಟ್ ಎಂಬುದು ಗೊತ್ತಾಗಿದೆ. ತನ್ನ ತಂದೆ ರಮಾನಂದ ಮತ್ತಿಗೋಡು ಸತ್ಯನಾರಾಯಣ ಅವರ ಪಾಸ್ ಪೋರ್ಟ್ ಅನ್ನು ಉದ್ದೇಶಪೂರ್ವಕವಾಗಿ ಬಳಸಿ ವಂಚನೆ ಮಾರ್ಗದಲ್ಲಿ ವಿದೇಶಕ್ಕೆ ಪ್ರಯಾಣಿಸಲು ಯತ್ನಿಸಿದ ಶ್ರೇಯಸ್ ವಿರುದ್ಧ ಕ್ರಮಕ್ಕೆ ಕೆಐಇ ಠಾಣೆಗೆ ದೂರು ಏರ್ಲೈನ್ಸ್ ಸಂಸ್ಥೆ ದೂರು ನೀಡಿತು. ಅದರನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗರ್ಲ್ ಫ್ರೆಂಡ್ ಡ್ರಾಪ್ ಮಾಡಲು ನಕಲಿ ಟಿಕೆಟ್:ಇನ್ನೊಂದು ಘಟನೆಯಲ್ಲಿ ತನ್ನ ಸ್ನೇಹಿತೆಯನ್ನು ಟರ್ಮಿನಲ್ಗೆ ಡ್ರಾಪ್ ಮಾಡಲು ನಕಲಿ ಟಿಕೆಟ್ ಬಳಸಿದ್ದ ಮತ್ತೊಬ್ಬ ಪೊಲೀಸರಿಗೆ ಸೆರೆಯಾಗಿದ್ದಾನೆ. ಜಾರ್ಖಂಡ್ ಮೂಲದ ಪ್ರಕಾಶ್ ಶ್ರೀವಾಸ್ತವ್ ಬಂಧಿತ. ಇತ್ತೀಚಿಗೆ ತನ್ನ ಗೆಳೆತಿಯನ್ನು ವಿಮಾನಕ್ಕೆ ಹತ್ತಿಸಲು ನಕಲಿ ಟಿಕೆಟ್ ಸೃಷ್ಟಿಸಿಕೊಂಡು ಆತ ಟರ್ಮಿನಲ್ಗೆ ಪ್ರವೇಶಿಸಿದ್ದ. ಆಗ ಆತನ ಟಿಕೆಟನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೆಐಎ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.