ಕನ್ನಡಪ್ರಭ ವಾರ್ತೆ ಬೆಂಗಳೂರುಮದ್ಯದ ಅಮಲಿನಲ್ಲಿ ತನ್ನನ್ನು ಗುರಾಯಿಸಿದ ಎಂದು ಆಟೋ ಚಾಲಕನೊಬ್ಬನಿಗೆ ಡ್ರ್ಯಾಗರ್ ನಿಂದ ಇರಿದು ಕೊಂದಿದ್ದ ಇಬ್ಬರನ್ನು ಚಿಕ್ಕಬಾಣವಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲೂರು ಸಮೀಪದ ರಜಾಕ್ ಸಾಪ್ಪಾಳ್ಯದ ನಿವಾಸಿ ಸೈಯದ್ ಶಫಿ (36) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ದರ್ಶನ್ ಅಲಿಯಾಸ್ ದಾಸ ಹಾಗೂ ಆತನ ಸ್ನೇಹಿತನ್ನು ಬಂಧಿಸಲಾಗಿದೆ. ಚಿಕ್ಕಬಾಣವಾರ ಸಮೀಪದ ಅಬ್ಬಿಗೆರೆ ಮುಖ್ಯರಸ್ತೆಯ ಮೀನಾ ಬಾರ್ ಬಳಿ ಭಾನುವಾರ ರಾತ್ರಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ತನ್ನ ಕುಟುಂಬ ಜತೆ ನೆಲೆಸಿದ್ದ ಶಫಿ, ಬಾಡಿಗೆ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಅಬ್ಬಿಗೆರೆ ಮುಖ್ಯರಸ್ತೆಯ ಮೀನಾ ಬಾರ್ ಬಳಿ ರಾತ್ರಿ ಆಟೋ ನಿಲ್ಲಿಸಿಕೊಂಡು ತನ್ನ ಗೆಳೆಯನ ಜತೆ ಶಫಿ ಮಾತನಾಡುತ್ತಿದ್ದ. ಅದೇ ವೇಳೆ ಬಾರ್ನಲ್ಲಿ ಗೆಳೆಯನ ಜತೆ ಮದ್ಯ ಸೇವಿಸಿ ಹೊರಬಂದ ದರ್ಶನ್, ರಸ್ತೆ ಬದಿ ಮೂತ್ರ ವಿರ್ಸಜನೆಗೆ ಹೋಗಿದ್ದ. ಆಗ ಅಲ್ಲೇ ರಸ್ತೆ ಬದಿ ಆಟೋದಲ್ಲಿದ್ದ ಶಫಿಯನ್ನು ನೋಡಿ ಏನೋ ಗುರಾಯಿಸುತ್ತೀಯಾ ಎಂದು ದರ್ಶನ್ ಕ್ಯಾತೆ ತೆಗಿದ್ದಾನೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಈ ವೇಳೆ ಕೆರಳಿದ ದರ್ಶನ್, ಏಕಾಏಕಿ ಡ್ರ್ಯಾಗರ್ನಿಂದ ಶಫಿಗೆ ಇರಿದು ಪರಾರಿಯಾಗಿದ್ದ. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಆತನ ಸ್ನೇಹಿತ ಮುಂದಾಗಿದ್ದಾನೆ. ಆದರೆ ತೀವ್ರ ರಕ್ತಸ್ರಾವದಿಂದ ಶಫಿ ಕೊನೆಯುಸಿರೆಳಿದ್ದಾನೆ. ಈ ಘಟನೆ ಸಂಬಂಧ ಮೃತನ ತಂದೆ ದೂರು ನೀಡಿದರು. ಅದರಂತೆ ತನಿಖೆಗಿಳಿದ ಪೊಲೀಸರು, ಕೃತ್ಯದ ನಡೆದ ಕೆಲವೇ ತಾಸಿನೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.