ಸಾರಾಂಶ
ಆಯೂರ್ ನಿರ್ದೇಶನದ ‘ನನ್ನ ಮಗಳೇ ಸೂಪರ್ ಸ್ಟಾರ್’ ಚಿತ್ರಕ್ಕೆ ಸೋಮವಾರ ಅದ್ಧೂರಿಯಾಗಿ ಮುಹೂರ್ತ ನಡೆದಿದೆ
ಬೆಂಗಳೂರು : ಆಯೂರ್ ನಿರ್ದೇಶನದ ‘ನನ್ನ ಮಗಳೇ ಸೂಪರ್ ಸ್ಟಾರ್’ ಚಿತ್ರಕ್ಕೆ ಸೋಮವಾರ ಅದ್ಧೂರಿಯಾಗಿ ಮುಹೂರ್ತ ನಡೆದಿದೆ. ವಿಶೇಷ ಎಂದರೆ, ಬಹಳ ವರ್ಷಗಳ ನಂತರ ಸಾಹಿತಿ ಬಿ.ಆರ್.ಲಕ್ಷ್ಮಣ್ ರಾವ್ ಅವರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ನೀಡುವ ಮೂಲಕ ಚಿತ್ರರಂಗಕ್ಕೆ ಮರಳಿದ್ದಾರೆ.
ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ ಲಕ್ಷ್ಮಣ್ ರಾವ್, ‘ನಾನು ಸಾಕಷ್ಟು ಭಾವಗೀತೆಗಳನ್ನು ಬರೆದಿದ್ದರೂ ಚಿತ್ರರಂಗಕ್ಕೂ ನನಗೂ ತುಂಬಾ ದೂರ. ಬಹಳಷ್ಟು ಮಂದಿ ಸಿನಿಮಾಗಳಿಗೆ ಹಾಡು ಬರೆಯುವಂತೆ ಕೇಳುತ್ತಿದ್ದರು. ಆದರೆ, ನಾನು ಬರೆದಿರಲಿಲ್ಲ. ನನ್ನ ಮಗಳೇ ಸೂಪರ್ ಸ್ಟಾರ್ ಚಿತ್ರದ ಕತೆ ಇಷ್ಟವಾಗಿ ಚಿತ್ರದಲ್ಲಿರುವ ಮೂರು ಹಾಡುಗಳಿಗೆ ನಾನೇ ಸಾಹಿತ್ಯ ನೀಡುತ್ತಿದ್ದೇನೆ. ತುಂಬಾ ವರ್ಷಗಳ ನಂತರ ಸಿನಿಮಾ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿರುವ ಖುಷಿ ನನ್ನದು’ ಎಂದು ಹೇಳಿದರು.
ಕೆವಿನ್ ಸಂಗೀತದಲ್ಲಿ, ರವೀಂದ್ರ ಸೊರಗಾವಿ ಹಾಗೂ ಮಂಗಳ ರವಿ ಅವರ ಕಂಠದಲ್ಲಿ ಹಾಡುಗಳು ಮೂಡಿ ಬರಲಿವೆ.
ನಿರ್ದೇಶಕ ಆಯೂರ್ ಮಾತನಾಡಿ, ‘ಹೆತ್ತವರಿಗೆ ತಮ್ಮ ಮಕ್ಕಳನ್ನು ಎಂಜಿನಿಯರ್, ಡಾಕ್ಟರ್, ಐಎಎಸ್ ಮಾಡುವ ಆಸೆ ಇರುತ್ತದೆ. ಆದರೆ, ಮಕ್ಕಳ ಕನಸುಗಳು ಬೇರೆ ಇರುತ್ತವೆ. ಹೆತ್ತವರ ಆಸೆ ಮತ್ತು ಮಕ್ಕಳ ಕನಸುಗಳು ಯಾವುದು ಸರಿ ಎನ್ನುವುದರ ಮೇಲೆ ಸಿನಿಮಾ ಸಾಗುತ್ತದೆ. ಮಕ್ಕಳಿಗೆ ಮತ್ತು ಪೋಷಕರಿಗೆ ಸಂದೇಶ ಕೊಡುವ ಸಿನಿಮಾ ಇದು’ ಎಂದು ಹೇಳಿದರು.
ಮೇಕಪ್ ಕುಮಾರ್ ಎಂದೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಎನ್.ಎ. ಶಿವಕುಮಾರ್ ಈ ಚಿತ್ರದ ನಿರ್ಮಾಪಕರು. ಬಾಲ ನಟಿ ರೀತು ಸಿಂಗ್, ಚೆಲುವರಾಜ್, ಸುಬ್ರಮಣಿ, ರಘುರಾಮ್, ಮೀನಾಕ್ಷಿ, ಕುಮಾರ್, ರಣವೀರ್ ನಟಿಸಿದ್ದಾರೆ. ಪರಿಸರ ಪ್ರೇಮಿ ಹಾಗೂ ಸಮಾಜ ಸೇವಕಿ ರೇವತಿ ಕಾಮತ್, ನಿರ್ದೇಶಕ ನಂಜುಂಡೇಗೌಡ ಅವರು ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಹಾಜರಿದ್ದರು.