ಸಾರಾಂಶ
‘ಉಪೇಂದ್ರ ಅವರಿಂದ ರಾತ್ರಿ ಪೂರ್ತಿ ಬೈಸಿಕೊಂಡ ಮೇಲೆ ಮರುದಿನ ಸಂಗೀತ ನಿರ್ದೇಶಕನಾಗಲು ಮನಸ್ಸು ಮಾಡಿದೆ. ಅಲ್ಲಿಂದ ಇಲ್ಲಿವರೆಗೂ 150 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ.’
ಸಿನಿವಾರ್ತೆ
‘ಉಪೇಂದ್ರ ಅವರಿಂದ ರಾತ್ರಿ ಪೂರ್ತಿ ಬೈಸಿಕೊಂಡ ಮೇಲೆ ಮರುದಿನ ಸಂಗೀತ ನಿರ್ದೇಶಕನಾಗಲು ಮನಸ್ಸು ಮಾಡಿದೆ. ಅಲ್ಲಿಂದ ಇಲ್ಲಿವರೆಗೂ 150 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ.’
- ಹೀಗೆ ಹೇಳಿದ್ದು ಸಂಗೀತ ನಿರ್ದೇಶಕ ವಿ ಮನೋಹರ್.
ವಿ ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಸಿನಿಮಾ ‘31 ಡೇಸ್’ ಆಡಿಯೋ ಬಿಡುಗಡೆಯಲ್ಲಿ ಅವರು ಮಾತನಾಡಿದರು.
‘ನಿರ್ದೇಶಕನಾಗಲು ಕತೆ ಬರೆದುಕೊಂಡು ನಿರ್ಮಾಪಕರಿಗಾಗಿ ಸಾಕಷ್ಟು ಹುಡುಕಾಟ ಕೂಡ ಮಾಡುತ್ತಿದ್ದೆ. ಆಗ ಉಪೇಂದ್ರ ‘ತರ್ಲೆ ನನ್ಮಗ’ ಚಿತ್ರ ಶುರು ಮಾಡಿ, ನನ್ನನ್ನೇ ಸಂಗೀತ ನಿರ್ದೇಶಕನಾಗುವಂತೆ ಒತ್ತಾಯ ಮಾಡಿದರು. ಅದಕ್ಕೆ ಕಾರಣ ನಾನು ಮತ್ತು ಎಲ್ಎನ್ ಶಾಸ್ತ್ರಿ ಸೇರಿ ಮಾಡಿದ್ದ ಒಂದು ಆಲ್ಬಂ. ಆದರೆ, ನಾನು ಸಂಗೀತ ಮಾಡಲು ಒಪ್ಪಲಿಲ್ಲ. ಇದೇ ವಿಷಯವಾಗಿ ರಾತ್ರಿ ಪೂರ್ತಿ ಉಪೇಂದ್ರ ಅವರಿಂದ ಬೈಯಿಸಿಕೊಂಡಿದ್ದು ಆಯಿತು. ಮರುದಿನ ಸಂಗೀತ ನಿರ್ದೇಶಕನಾಗಲು ಒಪ್ಪಿದೆ. ‘ತರ್ಲೆ ನನ್ಮಗ’ ಹಿಟ್ ಆಯಿತು. ಆ ನಂತರ ಜಗ್ಗೇಶ್ ಅವರ ‘ಭಂಡ ನನ್ನ ಗಂಡ’ ಚಿತ್ರಕ್ಕೆ ಸಂಗೀತ ಮಾಡಿದೆ. ಅದೂ ಸೂಪರ್ ಹಿಟ್ ಆಯಿತು. ಅಲ್ಲಿಂದ ಸತತವಾಗಿ ಜಗ್ಗೇಶ್ ಅವರೊಬ್ಬರಿಗೇ 28 ಚಿತ್ರಗಳಿಗೆ ಸಂಗೀತ ಮಾಡಿದೆ. ಈಗಲೂ ನನ್ನ ಆಸೆ ಸಿನಿಮಾ ನಿರ್ದೇಶಕನಾಗಬೇಕು ಎಂಬುದು’ ಎಂದು ವಿ ಮನೋಹರ್ ಹೇಳಿದರು.
ನಿರಂಜನ್ ಶೆಟ್ಟಿ ಈ ಚಿತ್ರದ ನಾಯಕ. ನಾಗವೇಣಿ ಎನ್ ಶೆಟ್ಟಿ ಚಿತ್ರದ ನಿರ್ಮಾಪಕರು. ರಾಜಾ ರವಿಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಪ್ರಜ್ವಲಿ ಸುವರ್ಣ ನಾಯಕಿ.