ರಾಯ್ಪುರ: ತನ್ನ 2ನೇ ತವರು ಕ್ರೀಡಾಂಗಣ ರಾಯ್ಪುರದಲ್ಲಿ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ನ ಬಗ್ಗುಬಡಿದಿದ್ದ ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಈಗ ಮತ್ತೊಂದು ಗೆಲುವಿನ ಕಾತರದಲ್ಲಿದೆ. ತಂಡ ಬುಧವಾರ ಕೋಲ್ಕತಾ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ಆರ್ಸಿಬಿ ಪ್ಲೇ-ಆಫ್ ಸ್ಥಾನ ಬಹುತೇಕ ಖಚಿತವಾಗಲಿದೆ.
14 ಪಂದ್ಯಗಳ ಪೈಕಿ ಆರ್ಸಿಬಿ ಈಗ 11 ಪಂದ್ಯಗಳನ್ನಾಡಿದ್ದು, 7 ಗೆಲುವಿನೊಂದಿಗೆ 14 ಅಂಕ ಸಂಪಾದಿಸಿದೆ. ಯಾವುದೇ ತಂಡಕ್ಕೂ ಪ್ಲೇ-ಆಫ್ಗೇರಲು 16 ಅಂಕ ಅನಿವಾರ್ಯ. ಆರ್ಸಿಬಿ ಈ ಪಂದ್ಯದಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವುದರ ಜೊತೆಗೆ ಪ್ಲೇ-ಆಫ್ಗೆ ಮತ್ತಷ್ಟು ಹತ್ತಿರವಾಗಲಿದೆ. ಬಾಕಿ 2 ಪಂದ್ಯದಲ್ಲಿ ಸೋತರೂ ತಂಡಕ್ಕೆ ಪ್ಲೇ-ಆಫ್ಗೇರುವ ಸಾಧ್ಯತೆಯೂ ಇರಲಿದೆ.
ಬದಲಾವಣೆ:
ಆರ್ಸಿಬಿ ಸತತ 2 ಸೋಲಿನ ಬಳಿಕ ಕಳೆದ ಪಂದ್ಯದಲ್ಲಿ ಗೆದ್ದಿತ್ತು. ಆದರೆ ತಂಡದಲ್ಲಿ ಕೆಲ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ವಿರಾಟ್ ಕೊಹ್ಲಿ ಸತತ 2 ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರೂ ಅವರು ಫಾರ್ಮ್ ಬಗ್ಗೆ ತಂಡಕ್ಕೆ ಚಿಂತೆಯಿಲ್ಲ. ಆದರೆ ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ, ಸುಯಶ್ ಶರ್ಮಾ ವಿಫಲರಾಗುತ್ತಿದ್ದಾರೆ. ಕೆಕೆಆರ್ ವಿರುದ್ಧ ಶೆಫರ್ಡ್ ಬದಲು ಜೇಕಬ್ ಡಫಿಯನ್ನು ಆಡಿಸುವ ಸಾಧ್ಯತೆಯಿದ್ದು, ಸುಯಶ್ ಬದಲು ವೆಂಕಟೇಶ್ ಶರ್ಮಾಗೆ ಸ್ಥಾನ ಸಿಗಬಹುದು. ಫಿಲ್ ಸಾಲ್ಟ್ ಇನ್ನೂ ತಂಡವನ್ನು ಕೂಡಿಕೊಳ್ಳದ ಕಾರಣ ಅವರ ಬದಲು ಮತ್ತೆ ಜೇಕಬ್ ಬೆಥೆಲ್ ಆಡಲಿದ್ದಾರೆ.
ನಿರ್ಣಾಯಕ ಪಂದ್ಯ :
ಆರಂಭಿಕ 6 ಪಂದ್ಯಗಳಲ್ಲಿ ಒಂದೂ ಗೆಲುವು ಸಾಧಿಸದ ಕೆಕೆಆರ್ ಈಗ ಗೇರ್ ಬದಲಿಸಿ ಆಡುತ್ತಿದೆ. ತಂಡ ಕೊನೆ 4 ಪಂದ್ಯದಲ್ಲೂ ಗೆದ್ದು ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಂಡಿದೆ. ತಂಡ 10 ಪಂದ್ಯಗಳಲ್ಲಿ 9 ಅಂಕ ಸಂಪಾದಿಸಿದೆ. ಪ್ಲೇ-ಆಫ್ಗೇರಲು ತಂಡಕ್ಕೆ ಇನ್ನುಳಿದ 4 ಪಂದ್ಯಗಳಲ್ಲೂ ಗೆಲ್ಲಬೇಕು. ಒಂದು ವೇಳೆ ಆರ್ಸಿಬಿ ವಿರುದ್ಧ ಸೋತರೆ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ.
