ಸಾರಾಂಶ
ಸಿನಿಮಾ ಮೇಕಿಂಗ್ ವೇಳೆ ಎಲ್ಲವನ್ನೂ ಏಕಕಾಲಕ್ಕೆ ಗ್ರಹಿಸುವ ಯಶ್ ಅವರ ದೃಷ್ಟಿಕೋನ ನನಗೆ ಅಚ್ಚರಿ ತರಿಸಿತು. ಅವರದು ಸಿನಿಮಾವನ್ನೂ ಮೀರಿದ ಅಗಾಧ ಗ್ರಹಿಕೆ. ಅದೊಂಥರ ಸಾಂಸ್ಕೃತಿಕ ಯುಗಧರ್ಮದಂತಿರುತ್ತದೆ’
ಸಿನಿವಾರ್ತೆ
‘ಸಿನಿಮಾ ಮೇಕಿಂಗ್ ವೇಳೆ ಎಲ್ಲವನ್ನೂ ಏಕಕಾಲಕ್ಕೆ ಗ್ರಹಿಸುವ ಯಶ್ ಅವರ ದೃಷ್ಟಿಕೋನ ನನಗೆ ಅಚ್ಚರಿ ತರಿಸಿತು. ಅವರದು ಸಿನಿಮಾವನ್ನೂ ಮೀರಿದ ಅಗಾಧ ಗ್ರಹಿಕೆ. ಅದೊಂಥರ ಸಾಂಸ್ಕೃತಿಕ ಯುಗಧರ್ಮದಂತಿರುತ್ತದೆ’.
- ಯಶ್ ಬಗ್ಗೆ ರುಕ್ಮಿಣಿ ವಸಂತ್ ಆಡಿರುವ ಮಾತುಗಳಿವು. ಈ ಮೂಲಕ ರುಕ್ಮಿಣಿ, ಯಶ್ ಕುರಿತಾದ ತಮ್ಮ ಗ್ರಹಿಕೆಗಳನ್ನು ದಾಖಲಿಸುವ ಜೊತೆಗೆ ‘ಟಾಕ್ಸಿಕ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದನ್ನು ಅಧಿಕೃತಗೊಳಿಸಿದ್ದಾರೆ.
‘ಕಾಂತಾರದ ಜಗತ್ತು ನಮ್ಮ ಕಲ್ಪನೆಯನ್ನೂ ಮೀರಿದ್ದು. ಆಳದವರೆಗೆ ಹಬ್ಬಿರುವ ಸಾಂಸ್ಕೃತಿಕ ಬೇರುಗಳನ್ನು ಸ್ಪರ್ಶಿಸಿ ವರ್ತಮಾನಕ್ಕೂ ಅನ್ವಯಿಸಿ ಕತೆ ಹೇಳುವ ಕಲೆ ದೊಡ್ಡದು. ರಿಷಬ್ ಅವರು ಅಂಥಾ ದೈತ್ಯ ಪ್ರತಿಭೆ’ ಎಂದೂ ರುಕ್ಮಿಣಿ ಹೇಳಿದ್ದಾರೆ.
‘ನನಗೆ ಪ್ಯಾನ್ ಇಂಡಿಯಾ ಸ್ಟಾರ್ ಅನ್ನೋದಕ್ಕಿಂತಲೂ ಭಾಷೆಯನ್ನು ಮಾಧ್ಯಮವಾಗಿಟ್ಟು ಹೆಚ್ಚು ಹೆಚ್ಚು ಜನರನ್ನು ತಲುಪುವುದೇ ಮುಖ್ಯ. ಕನ್ನಡ ಚಿತ್ರರಂಗದಲ್ಲಿ ತಳಮಟ್ಟದಿಂದಲೇ ಅದ್ಭುತ ಕೆಲಸಗಳಾಗುತ್ತಿವೆ. ಕೆಜಿಎಫ್, ಕಾಂತಾರದಂಥಾ ಜಗತ್ತು ತಿರುಗಿ ನೋಡುವ ಸಿನಿಮಾಗಳ ಜೊತೆಗೆ ‘ಸನ್ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ’ ಎಂಬ ಆಸ್ಕರ್ ರೇಸ್ನಲ್ಲಿರುವ ಕಿರುಚಿತ್ರದ ಜೊತೆಗೆ ವೈವಿಧ್ಯಮಯ ಸಿನಿಮಾಗಳು ಬರುತ್ತಿವೆ. ಇಂಥಾ ಇಂಡಸ್ಟ್ರಿಯಿಂದ ಬಂದು, ಈ ಚಿತ್ರರಂಗ ಗರಿಗೆದರುವ ಹೊತ್ತಿನಲ್ಲಿ ಮುಖ್ಯ ಭೂಮಿಕೆಯಲ್ಲಿರುವುದು ಖುಷಿ ಅನಿಸುತ್ತದೆ’ ಎಂದಿದ್ದಾರೆ.