ಸಾರಾಂಶ
ಸಿನಿವಾರ್ತೆ‘
ಛೂ ಮಂತರ್ ಸಿನಿಮಾದ ಒಂದೊಂದು ಪೋಸ್ಟರ್ ಬಿಟ್ಟಾಗಲೂ ಈ ಸಿನಿಮಾ ರಿಲೀಸ್ ಅನ್ನು ಜನ ಎಲ್ಲಿ ತೋಳ ಬಂತು ತೋಳ ಕಥೆ ಅಂದುಕೊಂಡು ಬಿಡ್ತಾರೇನೋ ಅಂತ ಆತಂಕ ಆಗ್ತಿತ್ತು. ಆದರೆ ಜ.10ರಂದು ನಿಜಕ್ಕೂ ಸಿನಿಮಾ ರಿಲೀಸ್ ಆಗ್ತಿದೆ’ ಎಂದು ನಟ ಶರಣ್ ಹೇಳಿದ್ದಾರೆ.ಶರಣ್ ನಾಯಕನಾಗಿರುವ ಕರ್ವ ನವನೀತ್ ನಿರ್ದೇಶನದ ‘ಛೂ ಮಂತರ್’ ಸಿನಿಮಾದ ಟೀಸರ್ ಬಿಡುಗಡೆ ಇತ್ತೀಚೆಗೆ ನಡೆಯಿತು.
ಈ ವೇಳೆ ಮಾತನಾಡಿದ ಶರಣ್, ‘ಬಹಳಷ್ಟು ಸಮಯದಿಂದ ಕನ್ನಡದಲ್ಲಿ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಆಗಿಲ್ಲ. ಕಾರಣ ಈ ವೇಳೆ ಪರಭಾಷೆಯ ಬಿಗ್ ಬಜೆಟ್ ಸಿನಿಮಾ ರಿಲೀಸ್ ಆಗುವ ಭಯ. ಆದರೆ ನನ್ನ ಪ್ರಶ್ನೆ ಸಂಕ್ರಾಂತಿಗೆ ಕನ್ನಡ ಸಿನಿಮಾ ಬೇಡ್ವಾ? ಈ ನಿಟ್ಟಿನಲ್ಲಿ ನಾವು ಛೂಮಂತರ್ ಸಿನಿಮಾ ರಿಲೀಸ್ ಮಾಡ್ತಿದ್ದೀವಿ. ಇದು ಉತ್ತಮ ಪ್ರದರ್ಶನ ಕಂಡರೆ ಮುಂದೆಯೂ ಒಳ್ಳೊಳ್ಳೆ ಕನ್ನಡ ಸಿನಿಮಾಗಳನ್ನು ಸಂಕ್ರಾಂತಿಗೆ ಬಿಡುಗಡೆ ಮಾಡುವ ಧೈರ್ಯ ಮಾಡ್ತಾರೆ’ ಎಂದು ಹೇಳಿದರು. ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ಈ ಸಿನಿಮಾ ನಿರ್ಮಿಸಿದ್ದಾರೆ. ನವನೀತ್, ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್, ಚಿಕ್ಕಣ್ಣ, ದಿಲೀಪ್ ರಾಜ್ ಸುದ್ದಿಗೋಷ್ಠಿಯಲ್ಲಿದ್ದರು.