ಸಿನಿವಾರ್ತೆ
‘ಕೋಪ, ಇಗೋ, ಯಶಸ್ಸು ಇದ್ದಾಗ ಸಂಬಂಧದಲ್ಲಿ ಬಿರುಕು ಸಹಜ. ನನ್ನ ಹಂಸಲೇಖ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಾಗ ಸಂಭ್ರಮಿಸಿದವರೇ ಅಧಿಕ. ಆದರೆ ನಮ್ಮಿಬ್ಬರದ್ದು ಚಿತ್ರರಂಗ ಕಂಡ ಬೆಸ್ಟ್ ಜೋಡಿ. ಹಲವು ವರ್ಷಗಳಿಂದ ಜೊತೆಗೆ ಕೆಲಸ ಮಾಡದಿದ್ದರೂ, ಒಳ್ಳೆಯ ಸ್ನೇಹಿತರಾಗಿದ್ದೇವೆ. 40 ವರ್ಷಗಳ ಹಿಂದೆ ನನಗೆ ಏನೂ ಗೊತ್ತಿರಲಿಲ್ಲ. ಹಂಸಲೇಖ ಬರೆದುಕೊಟ್ಟಾಗಲೇ ಅದನ್ನು ಹೇಗೆ ತೆಗೆಯಬೇಕು ಎಂದು ಗೊತ್ತಾಗಿದ್ದು. ನನ್ನನ್ನು ‘ಕ್ರೇಜಿ ಸ್ಟಾರ್’ ಮಾಡಿದ್ದು ಅವರೇ. ಇವತ್ತಿಗೂ ನಾನು ಹೆಚ್ಚು ನಗುತ್ತೇನೆ ಎಂದರೆ, ಅದು ಅವರ ಜೊತೆಗೆ ಮಾತ್ರ. ಆ ನಗುವೇ ನಮ್ಮನ್ನು ಇಷ್ಟು ದೂರ ಕರೆದುಕೊಂಡು ಬಂದಿದೆ’.
ಇದು ರವಿಚಂದ್ರನ್ ಮಾತು.
ಬಹಳ ಕಾಲದಿಂದ ಜೊತೆಯಾಗಿ ಕಾಣಿಸಿಕೊಳ್ಳದ ರವಿಚಂದ್ರನ್ - ಹಂಸಲೇಖಾ ಜೋಡಿ ಇದೀಗ ‘ಕ್ರೇಜಿ ಬ್ರಹ್ಮ’ ಸಂಗೀತ ಕಾರ್ಯಕ್ರಮದ ಮೂಲಕ ಜೊತೆಯಾಗುತ್ತಿದ್ದಾರೆ. ಈ ಹಿನ್ನೆಲೆಯ ಸುದ್ದಿಗೋಷ್ಠಿಯಲ್ಲಿ ರವಿಚಂದ್ರನ್, ಹಂಸಲೇಖ ಪಾಲ್ಗೊಂಡರು.
ಮೇ 30ರಂದು ಸಂಜೆ 6ರಿಂದ ರಾತ್ರಿ 12ರವರೆಗೆ ಕೆಂಗೇರಿಯ ಜೆಕೆ ಗ್ರಾಂಡ್ ಅರೇನಾದಲ್ಲಿ ‘ಕ್ರೇಜಿ ಬ್ರಹ್ಮ’ ಸಂಗೀತ ಕಾರ್ಯಕ್ರಮ ನಡೆಯಲಿದೆ. ರವಿಚಂದ್ರನ್ ಹಾಗೂ ಹಂಸಲೇಖ ಕಾಂಬಿನೇಶನ್ನಲ್ಲಿ ಮೂಡಿ ಬಂದಿರುವ ಪ್ರಮುಖ ಹಾಡುಗಳನ್ನು ಹಾಡುವುದರ ಜೊತೆಗೆ ಮರುಸೃಷ್ಟಿ ಮಾಡಲಾಗುತ್ತಿದೆ. ದೇಶದ ಜನಪ್ರಿಯ ಗಾಯಕರು ಹಾಡುಗಳನ್ನು ಹಾಡಲಿದ್ದಾರೆ.
ಇನ್ನೋವೇಟಿವ್ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸುತ್ತಿದೆ.
