ಮಲಯಾಳ ಚಿತ್ರರಂಗ ಲೈಂಗಿಕ ಕಿರುಕುಳ ಪ್ರಕರಣ ಕ್ಲೋಸ್‌?

| N/A | Published : Jun 05 2025, 04:08 AM IST / Updated: Jun 05 2025, 04:47 AM IST

ಮಲಯಾಳ ಚಿತ್ರರಂಗ ಲೈಂಗಿಕ ಕಿರುಕುಳ ಪ್ರಕರಣ ಕ್ಲೋಸ್‌?
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವರ್ಷ ಕೇರಳ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ಪ್ರಮುಖ ವ್ಯಕ್ತಿಗಳ ವಿರುದ್ಧದ ಲೈಂಗಿಕ ಕಿರುಕುಳದ ಎಲ್ಲಾ 35 ಪ್ರಕರಣಗಳನ್ನು ಶೀಘ್ರ ಮುಚ್ಚಲಾಗಿವುದು ಎಂದು ತನಿಖಾ ತಂಡಗಳ ಮೂಲಗಳು ತಿಳಿಸಿವೆ. 

 ಕೊಚ್ಚಿ: ಕಳೆದ ವರ್ಷ ಕೇರಳ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ಪ್ರಮುಖ ವ್ಯಕ್ತಿಗಳ ವಿರುದ್ಧದ ಲೈಂಗಿಕ ಕಿರುಕುಳದ ಎಲ್ಲಾ 35 ಪ್ರಕರಣಗಳನ್ನು ಶೀಘ್ರ ಮುಚ್ಚಲಾಗಿವುದು ಎಂದು ತನಿಖಾ ತಂಡಗಳ ಮೂಲಗಳು ತಿಳಿಸಿವೆ. ಸಂತ್ರಸ್ತರು ಮತ್ತು ಸಾಕ್ಷಿಗಳು ತನಿಖೆಗೆ ಸಹಕರಿಸಲು ನಿರಾಕರಿಸಿರುವ ಕಾರಣ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೊತ್ತಾಗಿದೆ.

ಈ ಬಗ್ಗೆ ಸಂತ್ರಸ್ತೆಯರಲ್ಲಿ ಒಬ್ಬರಾದ ನಟಿ ಮೀನು ಮುನೀರ್‌ ಮಾತನಾಡಿ, ‘ನಾನು ಮೊದಲು ಚಿತ್ರರಂಗದ ಕೆಲವರ ವಿರುದ್ಧದ ಲೈಂಗಿಕ ಕಿರುಕುಳದ ಪ್ರಕರಣವನ್ನು ಸಾರ್ವಜನಿಕರ ಎದುರು ತೆರೆದಿಟ್ಟಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ನನ್ನ ವಿರುದ್ಧವೇ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದರು. ಇದರಿಂದ ಅನ್ಯ ಸಂತ್ರಸ್ತರು ಹೆದರಿದರು. ಹೀಗಾಗಿ ಸಂತ್ರಸ್ತರು ಹಾಗೂ ಸಾಕ್ಷಿಗಳು ಪ್ರಕರಣದಲ್ಲಿ ಹೇಳಿಕೆ ನೀಡಲು ಮುಂದೆ ಬರುತ್ತಿಲ್ಲ’ ಎಂದಿದ್ದಾರೆ.

ತಾವು ನಿರ್ದೇಶಕ ಬಾಲಚಂದ್ರನ್‌ ಮೆನನ್‌ ಅವರ ವಿರುದ್ಧದ ಸತ್ಯವನ್ನು ಬಹಿರಂಗಪಡಿಸಿದ ಬಳಿಕವೇ ಇದೆಲ್ಲಾ ಶುರುವಾಯಿತು ಎಂದಿರುವ ಮುನೀರ್‌, ‘ಮೊದಲು ನಟರಾದ ಎಂ. ಮುಖೇಶ್‌, ಇಡವೇಲಾ ಬಾಬು ಅವರ ಬಗ್ಗೆ ಮಾತನಾಡಿದಾಗ ಏನೂ ಸಮಸ್ಯೆಯಾಗಿರಲಿಲ್ಲ. ಆದರೆ ಪ್ರಮುಖ ನಟರು ಮತ್ತು ಮೆನನ್‌ ಬಗ್ಗೆ ಮಾತನಾಡುತ್ತಿದ್ದಂತೆ ಕೊಲೆ ಬೆದರಿಕೆಗಳು ಶುರುವಾದವು. ಅವು ನನ್ನ ವಿರುದ್ಧ ಸುಳ್ಳು ಪೋಕ್ಸೋ ಮತ್ತು ಮಾನಹಾನಿ ಕೇಸ್‌ ಕೂಡ ದಾಖಲಿಸಿದರು. ನನಗೆ ಮಧ್ಯಂತರ ಜಾಮೀನನ್ನೂ ನಿರಾಕರಿಸಲಾಗಿದೆ. ಇದು ರಾಜಕೀಯ ಷಡ್ಯಂತ್ರದ ಭಾಗ’ ಎಂದು ಆರೋಪಿಸಿದರು.

‘ನಾನು ಮಾಡಿದ ತಪ್ಪಾದರೂ ಏನು? ನಾನು ಸತ್ಯವನ್ನು ಬಹಿರಂಗಪಡಿಸಿದೆನಷ್ಟೇ. ಆದರೆ ಅದಾದ ಬಳಿಕನನಗಾದ ಅನುಭವವನ್ನು ನೋಡಿ ಸಂತ್ರಸ್ತರು ತಮಗಾದ ಅನ್ಯಾಯದ ಬಗ್ಗೆ ಮಾತನಾಡಲು ಹೇಗೆ ಮುಂದೆ ಬರುತ್ತಾರೆ?’ ಎಂದು ಮೀನು ಪ್ರಶ್ನಿಸಿದರು.

ತಲ್ಲಣ ಸೃಷ್ಟಿಸಿದ್ದ ಹಗರಣ:

ಮಲಯಾಳಂ ಸಿನಿ ರಂಗದಲ್ಲಿನ ಸ್ತ್ರೀದ್ವೇಷ ಮತ್ತು ಕಿರುಕುಳವನ್ನು ತನಿಖೆ ಮಾಡಲು ಕೇರಳ ಸರ್ಕಾರ 2017ರಲ್ಲಿ ನ್ಯಾ। ಕೆ ಹೇಮಾ ನೇತೃತ್ವದಲ್ಲಿ ಸಮಿತಿಯೊಂದನ್ನು ಸ್ಥಾಪಿಸಿತ್ತು. ಅದು 2019ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. 2024ರ ಆ.19ರಂದು ಈ ವರದ ಬಹಿರಂಗವಾಗಿತ್ತು. ವರದಿಯಲ್ಲಿ ಚಿತ್ರರಂಗದ ಗಣ್ಯರು ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ, ಪ್ರಕರಣಗಳ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

ಆದರ ಸಿನಿರಂಗದ ಪ್ರಮುಖರ ವಿರುದ್ಧ ದೂರು ದಾಖಲಿಸಿದ್ದ ಸಂತ್ರಸ್ತರು ಮತ್ತು ಸಾಕ್ಷಿಗಳ ವಿರುದ್ಧವೇ ಸುಳ್ಳು ಕೇಸುಗಳು ದಾಖಲಾದ ಹಿನ್ನೆಲೆಯಲ್ಲಿ, ಇದೀಗ ಯಾರೂ ಹೇಳಿಕೆ ನೀಡಿ ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಎಲ್ಲಾ ಪ್ರಕರಣಗಳನ್ನು ಮುಚ್ಚಲಾಗುತ್ತಿದೆ.

Read more Articles on