ಸಾರಾಂಶ
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮೂಲದ ಎರಡು ಹುರಿಯತ್ ಸಂಘಟನೆಗಳು ಪ್ರತ್ಯೇಕತಾವಾದ ಹೋರಾಟ ಕೈಬಿಟ್ಟು, ನವ ಭಾರತ ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಹೋರಾಟಕ್ಕೆ ಕೈಜೋಡಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಜಮ್ಮು ಕಾಶ್ಮೀರ ತೆಹ್ರಿಕಿ ಇಷ್ತೆಕ್ಲಾಲ್ ಮತ್ತು ಜಮ್ಮು ಕಾಶ್ಮೀರ ತಹ್ರೀಕ್ ಇ- ಇಷ್ತಿಕಾಮತ್ ಎಂಬ ಎರಡು ಸಂಘಟನೆಗಳು ಪ್ರತ್ಯೇಕತಾವಾದದಿಂದ ಹೊರಬಂದಿರುವುದಾಗಿ ಘೋಷಿಸಿವೆ. ಇದರೊಂದಿಗೆ ಕಳೆದ ಒಂದು ವಾರದ ಅವಧಿಯಲ್ಲಿ 4 ಹುರಿಯತ್ ಸಂಘಟನೆಗಳು ಪ್ರತ್ಯೇಕತಾವಾದ ಹೋರಾಟ ಕೈಬಿಟ್ಟಂತಾಗಿದೆ.
ಸಂಘಟನೆಯ ಅಧ್ಯಕ್ಷ ಗುಲಾಂ ನಬಿ ಸೋಫಿ ಮಾತನಾಡಿ, ನಾವು ಹಿಂದೆ ಪ್ರತ್ಯೇಕತಾವಾದದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದೆವು. ಆದರೆ ಇನ್ನು ಈ ಸಿದ್ಧಾಂತ ಬಿಟ್ಟು ಭಾರತ ಮತ್ತು ಭಾರತದ ಸಂವಿಧಾನದ ಮೇಲೆ ನಂಬಿಕೆ ಇಟ್ಟು ಪ್ರತ್ಯೇಕತಾವಾದವನ್ನು ಬಿಡುತ್ತಿದ್ದೇವೆ. ನಾನೂ ಒಬ್ಬ ಭಾರತೀಯ. ಇನ್ನು ಮುಂದೆ ಎಂದಿಗೂ ಪ್ರತ್ಯೇಕತೆಯನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಹುರಿಯತ್ ಜಮ್ಮು ಕಾಶ್ಮೀರ ಜನರ ಆಶೋತ್ತರ ಈಡೇರಿಸುವಲ್ಲಿ ವಿಫಲವಾಗಿದೆ.