ಸಾರಾಂಶ
ಲಾಹೋರ್: ಗಡಿಯ ಬಳಿ ವಿಚಕ್ಷಣ ನಡೆಸುತ್ತಿದ್ದ ಪಾಕಿಸ್ತಾನದ ಎಫ್ -16 ಫೈಟರ್ ಜೆಟ್ ಅನ್ನು ಭಾರತ ಹೊಡೆದುರುಳಿಸಿ ಹಾನಿಗೊಳಿಸಿದೆ ಎಂದು ಗೊತ್ತಾಗಿದೆ.
ಆಪರೇಷನ್ ಸಿಂದೂರಕ್ಕೆ ಪ್ರತಿಕಾರವಾಗಿ ಪಾಕಿಸ್ತಾನವು ಪಂಜಾಬ್ ಮತ್ತು ಕಾಶ್ಮೀರ ಗಡಿಯಲ್ಲಿ ಅಪ್ರಚೋದಿತ ಶೆಲ್ ಮತ್ತು ಮೋರ್ಟಾರ್ ದಾಳಿ ತೀವ್ರಗೊಳಿಸಿದ್ದು, ಇದಕ್ಕೆ ಭಾರತ ಕೂಡ ತಕ್ಕ ಉತ್ತರ ನೀಡುತ್ತಿದೆ. ಭಾರತದ ಹಾರಿಸಿದ ಶೆಲ್ನ ಬಿಡಿಭಾಗಗಳು ಲಾಹೋರ್ನಲ್ಲೂ ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.
ಪಂಜಾಬ್ ಗಡಿಯಲ್ಲಿ ಪಾಕ್ ನುಸುಳುಕೋರ ಗುಂಡಿಕ್ಕಿ ಹತ್ಯೆ
ಅಮೃತಸರ: ಪಂಜಾಬ್ನ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತ ಪ್ರವೇಶಕ್ಕೆ ಯತ್ನಿಸುತ್ತಿದ್ದ ಪಾಕ್ ನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ಬುಧವಾರ ಮಧ್ಯರಾತ್ರಿ ಇಲ್ಲಿನ ಫಿರೋಜ್ಪುರ ವಲಯದಲ್ಲಿ ಘಟನೆ ನಡೆದಿದೆ. ಪಾಕ್ ನುಸುಳುಕೋರ ಉದ್ದೇಶಪೂರ್ವಕವಾಗಿ ಕತ್ತಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ದಾಟುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬಿಎಸ್ಎಫ್ ಈ ಕ್ರಮ ಕೈಗೊಂಡಿದೆ. ಶವವನ್ನು ಪಂಜಾಬ್ ಪೊಲೀಸರಿಗೆ ಗಡಿ ಭದ್ರತಾ ಪಡೆ ಸಿಬ್ಬಂದಿ ಹಸ್ತಾಂತರಿಸಿದ್ದಾರೆ.
ಪಂಜಾಬ್ ಗಡಿಯಲ್ಲಿ ಪಾಕ್ ಹಾರಿಬಿಟ್ಟ ಕ್ಷಿಪಣಿ ಬಿಡಿಭಾಗ ಪತ್ತೆ
ಅಮೃತಸರ: ಭಾರತ ಮತ್ತು ಪಾಕಿಸ್ತಾನದನದ ಉದ್ವಿಗ್ನತೆ ನಡುವೆ ಅಮೃತಸರದ ಮಖಾನ ವಿಂಡಿ ಮತ್ತು ಹೋಶಿಯಾರ್ಪುರದಲ್ಲಿ ಕ್ಷಿಪಣಿ ಅವಶೇಷಗಳು ಪತ್ತೆಯಾಗಿದೆ. ಚೀನಾ ನಿರ್ಮಿತ ಪಿಎಲ್-15ಇ ಕ್ಷಿಪಣಿಯ ಬಿಡಿಭಾಗ ಎನ್ನಲಾಗಿದ್ದು ಆಪರೇಷನ್ ಸಿಂಧೂರಕ್ಕೆ ಪ್ರತೀಕಾರವಾಗಿ ಈ ಕ್ಷಿಪಣಿಯನ್ನು ಪಾಕಿಸ್ತಾನ ಹಾರಿಬಿಟ್ಟಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ.
ಪಂಜಾಬ್ ಗಡಿಯಲ್ಲಿ ಮಧ್ಯರಾತ್ರಿಯಿಡಿ ಅನೇಕ ಸ್ಫೋಟದ ಶಬ್ಧಗಳು ಸ್ಥಳೀಯರಿಗೆ ಕೇಳಿಸಿದೆ. ಈ ಬೆನ್ನಲ್ಲೇ ಕ್ಷಿಪಣಿಯ ಅವಶೇಷಗಳು ಪತ್ತೆಯಾಗಿದೆ. ಮಖಾನ ವಿಂಡಿಯ ಹೊಲದಲ್ಲಿ ಕ್ಷಿಪಣಿ ಅವಶೇಷಗಳು ಪತ್ತೆಯಾಗಿದೆ. ಜೊತೆಗೆ ಹೋಶಿಯಾರ್ಪುರದಲ್ಲಿ ಪಾಕಿಸ್ತಾನ ಹಾರಿಬಿಟ್ಟ ಚೀನಾ ನಿರ್ಮಿತ ಪಿಎಲ್-15ಇ ಕ್ಷಿಪಣಿಯ ಬಿಡಿಭಾಗವು ಪತ್ತೆಯಾಗಿದೆ. ಇನ್ನು ಸ್ಫೋಟಕ ಅವಶೇಷಗಳು ಪತ್ತೆಯಾದ ಪ್ರದೇಶಕ್ಕೆ ಸೇನಾ ಸಿಬ್ಬಂದಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.