ಚೆನ್ನೈ : ಏ.23ರ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಏರಲೇಬೇಕೆಂಬ ಪಣ ತೊಟ್ಟಿರುವ ಬಿಜೆಪಿಯ ಮಿತ್ರಪಕ್ಷ ಅಣ್ಣಾಡಿಎಂಕೆ, ಮಂಗಳವಾರ 297 ಭರವಸೆಗಳನ್ನು ಹೊಂದಿರುವ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಮಧ್ಯಮವರ್ಗವನ್ನು ಗುರಿಯಾಗಿಸಿಕೊಂಡು ಭರ್ಜರಿ ಉಚಿತ ಭರವಸೆಗಳನ್ನು ನೀಡಿದೆ. ಇವು ಇತರ ರಾಜ್ಯಗಳ ಗ್ಯಾರಂಟಿ ಮೀರಿಸುವಂಥ ಘೋಷಣೆಗಳಾಗಿವೆ.

ಜಯಲಲಿತಾರನ್ನು ಸಿಎಂ ಮುಖವಾಗಿರಿಸಿಕೊಂಡು 2011ರಲ್ಲಿ ಚುನಾವಣೆ ಎದುರಿಸಿದ್ದ ವೇಳೆ ನೀಡಲಾಗಿದ್ದ ಉಚಿತ ಫ್ಯಾನ್‌, ಮಿಕ್ಸರ್‌, ಗ್ರೈಂಡರ್‌ನಂತೆ, ಈ ಬಾರಿ ಅಧಿಕಾರಕ್ಕೆ ಬಂದರೆ ‘ಅಕ್ಕಿ ಪಡಿತರ ಚೀಟಿ’ ಇರುವ ಎಲ್ಲರಿಗೂ ಉಚಿತ ಫ್ರಿಡ್ಜ್‌ ನೀಡುವುದಾಗಿ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಮಂಗಳವಾರ ಘೋಷಿಸಿದ್ದಾರೆ.

ಪ್ರತಿ ಪರಿವಾರಕ್ಕೂ 10,000 ರು. ವಿಶೇಷ ನೆರವು

ಬೆಲೆಯೇರಿಕೆ ಮತ್ತು ತೆರಿಗೆ ಹೊರೆಯಿಂದ ಮುಕ್ತಿಗೆ ಪ್ರತಿ ಪರಿವಾರಕ್ಕೂ 10,000 ರು. ವಿಶೇಷ ನೆರವು, ಕರ್ನಾಟಕದ ಗೃಹ ಲಕ್ಷ್ಮಿಯಂತೆ ಮಹಿಳೆಯರಿಗೆ ಮಾಸಿಕ 2,000 ರು. ಸಹಾಯಧನ ಘೋಷಿಸಿರುವುದು ಗಮನ ಸೆಳೆಯುವಂತಿದೆ. ಅಲ್ಲದೆ, ಮಹಿಳೆಯರಂತೆ ಪುರುಷರಿಗೂ ಉಚಿತ ಬಸ್ ಯಾನ ಪ್ರಕಟಿಸಲಾಗಿದೆ.


ಇದರೊಂದಿಗೆ, ಪ್ರತಿ ಮನೆಗೆ ವರ್ಷಕ್ಕೆ 3 ಉಚಿತ ಸಿಲಿಂಡರ್‌ ನೀಡಲಾಗುವುದು. ಜಲ್ಲಿಕಟ್ಟು ಎಮ್ಮೆಗಳನ್ನು ಪಳಗಿಸುವವರು ಮೃತರಾದರೆ ಅವರ ಪರಿವಾರಕ್ಕೆ 10 ಲಕ್ಷ ರು. ನೆರವು ಮತ್ತು ವೃದ್ಧರ ಪಿಂಚಣಿ ಹೆಚ್ಚಳದ ಭರವಸೆಯನ್ನೂ ನೀಡಲಾಗಿದೆ. ಒಂದು ಕಡೆ ನೌಕರಿಯಲ್ಲಿರುವ 5 ಲಕ್ಷ ಮಹಿಳೆಯರಿಗೆ ‘ಅಮ್ಮ’ ಯೋಜನೆಯಡಿ 25,000 ರು. ಸಬ್ಸಿಡಿ ಅಡಿಯಲ್ಲಿ ದ್ವಿಚಕ್ರ ವಾಹನ ನೀಡುವುದಾಗಿ ತಿಳಿಸಿದೆ.

ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಸುಮಾರು 297 ಘೋಷಣೆ

ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಸುಮಾರು 297 ಘೋಷಣೆಗಳಿವೆ ಮತ್ತು ಕೊನೆಯದಾಗಿ, ‘ಸೇನೆಯಲ್ಲಿ ಹುತಾತ್ಮರಾದ ಮತ್ತು ಅಂಗವಿಕಲರಾದ ಸೈನಿಕರ ಕುಟುಂಬ ಸದಸ್ಯರಿಗೆ ಅನುಕಂಪದ ನೌಕರಿ ನೀಡಲಾಗುವುದು’ ಎಂದು ತಿಳಿಸಲಾಗಿದೆ.

ಅಲ್ಲದೆ. ‘ಉಚಿತ ಫ್ರಿಡ್ಜ್ ಗೃಹಿಣಿಯರ ಮನೆಯ ಕೆಲಸದ ಹೊರೆ ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ’ ಎಂದು ಪಳನಿಸ್ವಾಮಿ ಹೇಳಿದ್ದಾರೆ.