ಸಾರಾಂಶ
ಚಂಡೀಗಢ: ದೆಹಲಿ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವಾಯು ಮಾಲಿನ್ಯ ತೀವ್ರ ಸ್ವರೂಪ ಪಡೆದುಕೊಂಡಿದೆ. ದೆಹಲಿ ಮತ್ತು ಹರ್ಯಾಣದಲ್ಲಿ ಇದು ವಿಕೋಪದ ಹಂತಕ್ಕೆ ತಿರುಗಿದ್ದು, ವಾಯುಗುಣಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ದೀಪಾವಳಿಯ ಪಟಾಕಿಯು ಇದಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ.
ದೆಹಲಿಯ 38 ವಾಯುಗುಣಮಟ್ಟ ಪರೀಕ್ಷಾ ಕೇಂದ್ರಗಳ ಪೈಕಿ 35 ಕೇಂದ್ರಗಳ ಗುಣಮಟ್ಟವು ‘ಅತಿ ಗಂಭೀರ’ ಎಂದು ದಾಖಲಾಗಿದೆ. ಬವಾನಾ ಎಂಬಲ್ಲಿ 432 ಅಂಕ ದಾಖಲಾಗಿದ್ದು, ಇದು ಅತ್ಯಂತ ಗಂಭೀರವಾಗಿದೆ. ಪರಿಣಾಮ ದೆಹಲಿ ಪೂರ್ತಿ ಹೊಗೆ ಮುಸುಕಿದ ವಾತಾವರಣ ನಿರ್ಮಾಣವಾಗಿದೆ.
ಮತ್ತೊಂದೆಡೆ ಹರ್ಯಾಣದಲ್ಲಿಯೂ ಸಹ ಗಾಳಿ ಪ್ರಕೋಪಕ್ಕೆ ತಿರುಗಿದ್ದು, ವಾಯುಗುಣಮಟ್ಟ ಸೂಚ್ಯಂಕ 350 ಅಂಕ (ಅತಿ ಕಳಪೆ) ದಾಖಲಾಗಿದೆ/ ಜಲಂಧರ್, ಕುರುಕ್ಷೇತ್ರ, ರೋಹ್ಟಕ್ ಸೇರಿ ಹಲವೆಡೆ ಹೊಗೆ ಮಿಶ್ರಿತ ವಾತಾವರಣ ನಿರ್ಮಾಣವಾಗಿದೆ. ಇದೇ ಸ್ಥಿತಿ ಪಂಜಾಬ್ ಬಹುತೇಕ ಕಡೆ ಇದೆ.
ಪಾಕ್ನಲ್ಲೂ ಭಾರಿ ಹೊಗೆ ಮಾಲಿನ್ಯ: ಭಾರತದ ಮೇಲೆ ಗೂಬೆ
ಲಾಹೋರ್: ದಿಲ್ಲಿ ಸೇರಿ ಉತ್ತರ ಭಾರತದ ನಗರಿಗಳು ದೀಪಾವಳಿ ವೇಳೆ ಭಾರಿ ಹೊಗೆಮಾಲಿನ್ಯಕ್ಕೆ ತುತ್ತಾದ ಬೆನ್ನಲ್ಲೇ ಪಾಕಿಸ್ತಾನದ ಲಾಹೋರ್ ಹಾಗೂ ಗಡಿಯ ಹಲವು ನಗರಗಳಲ್ಲಿ ಹೊಗೆಮಾಲಿನ್ಯ ಉಂಟಾಗಿದೆ. ವಾಯುಗುಣಮಟ್ಟ ಸೂಚ್ಯಂಕವು ಕಳಪೆ ಎನ್ನಬಹುದಾದ 266ಕ್ಕೆ ಕುಸಿದಿದೆ.ಇದಕ್ಕೆ ಪಾಕ್ ಪಂಜಾಬ್ ಸಚಿವೆ ಮಾರ್ಯಂ ಔರಂಗಜೇಬ್ ಕಿಡಿಕಾರಿದ್ದು, ‘ಭಾರತದಲ್ಲಿನ ದೀಪಾವಳಿಯ ಪಟಾಕಿಗಳ ಹೊಗೆಯು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್ನನ್ನು ಮತ್ತಷ್ಟು ಮಲಿನಗೊಳಿಸುತ್ತಿದೆ. ಅಮೃತಸರ, ಲುಧಿಯಾನಾ, ಹರ್ಯಾಣ ಮತ್ತು ದೆಹಲಿಯಲ್ಲಿನ ವಿಷಪೂರಿತ ಗಾಳಿಯು ಲಾಹೋರ್ಗೆ ಬರುತ್ತಿದ್ದು, ಇಲ್ಲಿನ ವಾಯುಗುಣಮಟ್ಟವನ್ನು ಕುಗ್ಗಿಸುತ್ತಿದೆ’ ಎಂದು ದೂಷಿಸಿದ್ದಾರೆ.
ಉತ್ತರ ಭಾರತದ ಗಾಳಿಯು ಪಾಕಿಸ್ತಾನದ ದಿಕ್ಕಿನೆಡೆಗೆ ಸಾಗುತ್ತಿರುವ ಕಾರಣ ಲಾಹೋರ್ ವಿಶ್ವದ 2ನೇ ಕಲುಷಿತ ನಗರ ಎಂಬ ಪಟ್ಟ ಗಳಿಸಿಕೊಂಡಿದೆ ಎನ್ನಲಾಗಿದೆ. ಮೊದಲ ಸ್ಥಾನದಲ್ಲಿ 400 ಎಕ್ಯುಐನೊಂದಿಗೆ (ವಾಯು ಗುಣಮಟ್ಟ ಸೂಚ್ಯಂಕ) ದೆಹಲಿ ಇದೆ.