ವಿವಿಧ ರಾಜ್ಯಗಳಲ್ಲಿ ಯಶಸ್ವಿ ಅಣಕು ಯುದ್ಧ ಡ್ರಿಲ್‌

| N/A | Published : May 08 2025, 02:33 AM IST / Updated: May 08 2025, 04:18 AM IST

ಸಾರಾಂಶ

  ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಬುಧವಾರ ಸಂಜೆ ‘ಆಪರೇಷನ್‌ ಅಭ್ಯಾಸ್‌’ ಅಣಕು ಯುದ್ಧ ಕವಾಯತು ನಡೆಸಲಾಯಿತು.

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಕ್ಷಣಕ್ಷಣಕ್ಕೂ ಉದ್ವಿಗ್ನಗೊಳ್ಳುತ್ತಿರುವ ನಡುವೆ ಹಾಗೂ ಪಾಕ್‌ ವಿರುದ್ಧದ ‘ಆಪರೇಷನ್‌ ಸಿಂದೂರ’ ಕಾರ್ಯಾಚರಣೆ ಬೆನ್ನಲ್ಲೇ ಯುದ್ಧ ಸಂದರ್ಭದಲ್ಲಿ ಸುರಕ್ಷಿತರಾಗಿರಲು ಜನರಿಗೆ ತರಬೇತಿ ನೀಡುವ ಸಲುವಾಗಿ ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಬುಧವಾರ ಸಂಜೆ ‘ಆಪರೇಷನ್‌ ಅಭ್ಯಾಸ್‌’ ಅಣಕು ಯುದ್ಧ ಕವಾಯತು ನಡೆಸಲಾಯಿತು. 

ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ ಬೆಂಗಳೂರು ಸೇರಿದಂತೆ ಕರ್ನಾಟಕದ 3 ಸ್ಥಳಗಳು, ದೆಹಲಿಯ 55 ಜಾಗಗಳು, ಪಶ್ಚಿಮ ಬಂಗಾಳದ 4 ಶಾಲೆಗಳು, ಜಾರ್ಖಂಡ್‌ನ 5 ಜಿಲ್ಲೆಗಳು, ಮಹಾರಾಷ್ಟ್ರದ ಮುಂಬೈ, ತಮಿಳುನಾಡಿನ 2 ಪ್ರಮುಖ ಸ್ಥಳಗಳು, ಆಂಧ್ರಪ್ರದೇಶದ 4 ಕಡೆ, ಅಸ್ಸಾಂನ 14 ಜಿಲ್ಲೆಗಳ 18 ಪ್ರದೇಶಗಳು, ಕೇರಳದ 14, ಒಡಿಶಾದ 12, ಮಣಿಪುರದ 4 ಜಿಲ್ಲೆ, ಹರ್ಯಾಣದ ಎಲ್ಲಾ ಜಿಲ್ಲೆಗಳು, ರಾಜಸ್ಥಾನ, ಅರುಣಾಚಲ ಪ್ರದೇಶ, ಮಿಜೋರಾಂ ರಾಜ್ಯಗಳನ ನಿಗದಿತ ಪ್ರದೇಶಗಳಲ್ಲಿ ಕವಾಯತು ನಡೆಸಲಾಯಿತು. 

ಈ ವೇಳೆ ಸೈರನ್‌ಗೆ ಹೇಗೆ ಪ್ರತಿಕ್ರಿಯಿಸಬೇಕು, ವಾಯುದಾಳಿ ಆದರೆ ಏನು ಮಾಡಬೇಕು, ಬೆಂಕಿ ಹತ್ತಿಕೊಂಡಾಗ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವುದು ಹೇಗೆ, ಅವಶೇಷಗಳ ಅಡಿ ಸಿಲುಕಿದವರನ್ನು, ಎತ್ತರದ ಪ್ರದೇಶಗಳಲ್ಲಿರುವವರನ್ನು ಹೇಗೆ ರಕ್ಷಿಸಬೇಕು, ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸುವುದು ಹೇಗೆ ಎಂಬುದನ್ನು ಕಲಿಸಲಾಯಿತು. ಶಾಲೆಗಳಲ್ಲಿ ಮಕ್ಕಳಿಗೂ ಇದರ ತರಬೇತಿ ನೀಡಲಾಯಿತು. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಪೊಲೀಸರು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಸಾರ್ವಜನಿಕರಿಗೆ ತರಬೇತಿ ನೀಡಿದರು.

ಅತ್ತ, ವಿವಿಧೆಡೆಗಳಲ್ಲಿ ಕೆಲ ಹೊತ್ತು ವಿದ್ಯತ್‌ ಕಡಿತ ಮಾಡಿ ಬ್ಲ್ಯಾಕ್‌ ಔಟ್‌ ಅಭ್ಯಾಸವನ್ನೂ ಮಾಡಿಸಲಾಯಿತು.

ಈ ಮೊದಲು, ಯುದ್ಧ ನಡೆಯುವ ಸಾಧ್ಯತೆ ಇದ್ದುದರಿಂದ ಡ್ರಿಲ್‌ ಅವಶ್ಯಕ ಎನ್ನಲಾಗಿತ್ತು. ಆದರೆ ಇದೀಗ ಭಾರತ ಪಾಕಿಸ್ತಾನದ ಮೇಲೆ ‘ಆಪರೇಷನ್‌ ಸಿಂಧೂರ್‌’ ಹೆಸರಿನಲ್ಲಿ ಅನಿರೀಕ್ಷಿತ ದಾಳಿ ನಡೆಸಿರುವುದರಿಂದ ಪಾಕಿಸ್ತಾನವೂ ಕೆರಳಿ ಪ್ರತಿದಾಳಿ ನಡೆಸುವುದು ನಿಶ್ಚಿತ. ಹೀಗಿರುವಾಗ ಇಂತಹ ಕವಾಯತು ಅತ್ಯಗತ್ಯ ಎನಿಸಿಕೊಂಡಿದೆ.