ಸಾರಾಂಶ
ಆಂತರಿಕವಾಗಿ ಜರ್ಝರಿತವಾಗಿರುವ ಬಾಂಗ್ಲಾದೇಶದಲ್ಲೀಗ ನೋಟುಗಳ ಭಾರೀ ಕೊರತೆ ಎದುರಾಗಿದೆ. ದೇಶದ ಸಂಸ್ಥಾಪಕ ಮುಜೀಬರ್ ರೆಹಮಾನ್ ಅವರ ಫೋಟೋ ಇರುವ ನೋಟುಗಳ ಬಳಕೆಗೆ ಮೊಹಮ್ಮದ್ ಯೂನಸ್ ಸರ್ಕಾರ ನಿಷೇಧ ಹೇರಿರುವ ಕಾರಣ ದೇಶದಲ್ಲೀಗ ನೋಟುಗಳ ಕೊರತೆ ಎದುರಾಗಿದೆ.
ಮುಜಿಬುರ್ ಚಿತ್ರದ ನೋಟು ಬಳಕೆ ನಿಷೇಧ
₹15000 ಕೋಟಿಯ ನೋಟಿದ್ದರು ಲಾಭವಿಲ್ಲ==
ಢಾಕಾ: ಆಂತರಿಕವಾಗಿ ಜರ್ಝರಿತವಾಗಿರುವ ಬಾಂಗ್ಲಾದೇಶದಲ್ಲೀಗ ನೋಟುಗಳ ಭಾರೀ ಕೊರತೆ ಎದುರಾಗಿದೆ. ದೇಶದ ಸಂಸ್ಥಾಪಕ ಮುಜೀಬರ್ ರೆಹಮಾನ್ ಅವರ ಫೋಟೋ ಇರುವ ನೋಟುಗಳ ಬಳಕೆಗೆ ಮೊಹಮ್ಮದ್ ಯೂನಸ್ ಸರ್ಕಾರ ನಿಷೇಧ ಹೇರಿರುವ ಕಾರಣ ದೇಶದಲ್ಲೀಗ ನೋಟುಗಳ ಕೊರತೆ ಎದುರಾಗಿದೆ.ಕಳೆದ ವರ್ಷದ ವಿದ್ಯಾರ್ಥಿ ದಂಗೆ ಬಳಿಕ ರೆಹಮಾನ್ ಅವರ ಪುತ್ರಿ, ಮಾಜಿ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪದಚ್ಯುತಗೊಂಡಿತ್ತು. ಬಳಿಕ ದೇಶವ್ಯಾಪಿ ಮುಜೀಬುರ್ ಪ್ರತಿಮೆ ಧ್ವಂಸಗೊಳಿಸಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಈಗಾಗಲೇ ಮುದ್ರಣಗೊಂಡಿರುವ ಮುಜೀಬುರ್ ಚಿತ್ರ ಇರುವ 15000 ಕೋಟಿ ರು. ಮೌಲ್ಯದ ನೋಟು ಬಳಸದಿರಲು ಸರ್ಕಾರ ನಿರ್ಧರಿಸಿತ್ತು. ಅದರ ಜೊತೆಗೆ ಹೊಸ ನೋಟುಗಳನ್ನೂ ಮುದ್ರಿಸುತ್ತಿಲ್ಲ.ಒಂದೇ ಬಾರಿ ಎಲ್ಲಾ ನೋಟುಗಳನ್ನು ರದ್ದು ಮಾಡಲು ಸಾಮರ್ಥ್ಯವಿಲ್ಲದೇ, ಹೊಸ ನೋಟುಗಳನ್ನು ಮುದ್ರಿಸಲೂ ಆಗದ ಅಡಕತ್ತರಿ ಸ್ಥಿತಿಯಲ್ಲಿ ಬಾಂಗ್ಲಾದೇಶದ ಬ್ಯಾಂಕುಗಳು ಒದ್ದಾಡುತ್ತಿವೆ. ಮತ್ತೊಂದೆಡೆ ಇದೆಲ್ಲದರ ಪರಿಣಾಮ ಮಾರುಕಟ್ಟೆಯಲ್ಲಿ ಅಗತ್ಯ ಪ್ರಮಾಣದ ನೋಟುಗಳಿಲ್ಲದೇ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.