ಬಿಜೆಪಿ ನಾಯಕ ಪವನ್‌ ಸಿಂಗ್‌ ಪಶ್ಚಿಮ ಬಂಗಾಳ ಕ್ಷೇತ್ರದ ಅಸಾನ್ಸೋಲ್‌ ಕ್ಷೇತ್ರದಿಂದ ನೀಡಿದ್ದ ಬಿಜೆಪಿ ಚುನಾವಣಾ ಟಿಕೆಟ್‌ ನಿರಾಕರಿಸಿದ್ದಾರೆ.

ನವದೆಹಲಿ/ಕೋಲ್ಕತಾ: ಮಹಿಳೆಯರ ಕುರಿತು ದ್ವಂದ್ವಾರ್ಥ ಬರುವಂತಹ ಹಾಡುಗಳನ್ನು ಹಾಡುವ ಮೂಲಕ ವಿವಾದ ಸೃಷ್ಟಿಸಿದ್ದ ಬಿಜೆಪಿ ನಾಯಕ ಪವನ್‌ ಸಿಂಗ್‌ ಪಶ್ಚಿಮ ಬಂಗಾಳ ಕ್ಷೇತ್ರದ ಅಸಾನ್ಸೋಲ್‌ ಕ್ಷೇತ್ರದಿಂದ ನೀಡಿದ್ದ ಬಿಜೆಪಿ ಚುನಾವಣಾ ಟಿಕೆಟ್‌ ನಿರಾಕರಿಸಿದ್ದು, ಲೋಕಸಭಾ ಕಣದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ್ದಾರೆ.

ಕಣದಿಂದ ಹಿಂದಕ್ಕೆ ಸರಿಯಲು ಯಾವುದೇ ನಿರ್ದಿಷ್ಟ ಕಾರಣಗಳನ್ನು ಅವರು ನಮೂದಿಸಿಲ್ಲ, ಆದರೆ ಅವರು ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುವ ಹಾಗೂ ಹಾಡು ಹಾಡುವ ಕುರಿತು ಟಿಎಂಸಿ ಟೀಕೆ ಮಾಡಿತ್ತು. 

ಇಂಥವವರಿಗೆ ಟಿಕೆಟ್‌ ನೀಡುವುದು ಮಹಿಳೆಯರಿಗೆ ನೀಡುವ ಗೌರವವೇ ಎಂದು ಕಿಡಿಕಾರಿತ್ತು. ಈ ಹಿನ್ನೆಲೆಯಲ್ಲಿ ಅವರು ಕಣದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಈ ಬೆನ್ನಲ್ಲೇ ಟಿಎಂಸಿ ವಾಗ್ದಾಳಿ ನಡೆಸಿದ್ದು, ಚುನಾವಣಾ ಪ್ರಚಾರಕ್ಕೆ ಮುನ್ನವೇ ಹಾಲಿ ಟಿಎಂಸಿ ಸಂಸದ, ನಟ ಶತ್ರುಘ್ನ ಸಿನ್ಹಾ ಅವರ ವಿರುದ್ಧ ಸೊಲೊಪ್ಪಿಕೊಂಡು ಕ್ಷೇತ್ರ ಬಿಟ್ಟುಕೊಟ್ಟಿದೆ ಎಂದು ಟೀಕೆ ಮಾಡಿದೆ.

ಬಿಜೆಪಿಯು ಶನಿವಾರವಷ್ಟೇ ಪವನ್‌ ಸಿಂಗ್‌ ಅವರಿಗೆ ಅಸನ್ಸೋಲ್‌ ಕ್ಷೇತ್ರದಿಂದ ಟಿಕೆಟ್‌ ನೀಡಿತ್ತು. ಇಲ್ಲಿ ಟಿಎಂಸಿಯ ಶತ್ರುಘ್ನ ಸಿನ್ಹಾ ಮತ್ತೆ ಕಣಕ್ಕಿಳಿಯುವ ಸಾಧ್ಯತೆ ಇದೆ.