ಸಾರಾಂಶ
ಜೈಪುರ: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ 8 ಜೈಪುರ ನಗರಪಾಲಿಕೆ ಸದಸ್ಯರನ್ನು ರಾಜಸ್ಥಾನ ಬಿಜೆಪಿ ಶಾಸಕ ಬಾಲಮುಕುಂದ ಆಚಾರ್ಯ ಗಂಗಾಜಲ ಮತ್ತು ಗೋಮೂತ್ರ ಸಿಂಪಡಿಸಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಜೊತೆಗೆ ಭ್ರಷ್ಟಾಚಾರದಿಂದ ‘ಅಶುದ್ಧಗೊಂಡಿದೆ’ ಎಂದು ಆರೋಪ ಹೊರಿಸಿ ಜೈಪುರ ಮಹಾನಗರ ಪಾಲಿಕೆಯನ್ನೂ ಗೋಮೂತ್ರದಿಂದ ಶುದ್ಧೀಕರಿಸಲಾಗಿದೆ.
ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮಾಜಿ ಮೇಯರ್ ಮುನೇಶ್ ಗುರ್ಜಾರ್ ಅವರ ಜಾಗಕ್ಕೆ ಬಿಜೆಪಿ ಕುಸುಮ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ವೇಳೆ ಅವರಿಗೆ 7 ಕಾಂಗ್ರೆಸ್ ಮತ್ತು ಒಬ್ಬ ಸ್ವತಂತ್ರ ಸದಸ್ಯರ ಬೆಂಬಲ ದೊರೆತು, ಅವರೆಲ್ಲ ಬಿಜೆಪಿಗೆ ಸೇರ್ಪಡೆಯಾದರು.
ಬಳಿಕ ಯಾದವ್ರ ಪದಗ್ರಹಣದ ಮುನ್ನ ಪಾಲಿಕೆಯ ಕಚೇರಿಯನ್ನು ಮಂತ್ರಘೋಷದೊಂದಿಗೆ ಗಂಗಾಜಲದಿಂದ ಶುದ್ಧೀಕರಿಸಲಾಯಿತು. ಅಂತೆಯೇ ಬಿಜೆಪಿ ಸೇರಿದ 8 ಸದಸ್ಯರ ಮೇಲೆ ಗೋಮುತ್ರ ಸಿಂಪಡಿಸಿಲಾಯಿತು.
‘ಅವರನ್ನು ಅಪವಿತ್ರತೆ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ ಸನಾತನಿಗಳಾಗಿ ಪರಿವರ್ತಿಸಲಾಗಿದೆ. ಇನ್ನು ಅವರೆಲ್ಲ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ’ ಎಂದು ಶಾಸಕ ಆಚಾರ್ಯ ಹೇಳಿದ್ದಾರೆ.
ಇದನ್ನು ಟೀಕಿಸಿರುವ ಕಾಂಗ್ರೆಸ್, ‘ಭ್ರಷ್ಟರು ಬಿಜೆಪಿ ಸೇರುತ್ತಿದ್ದಂತೆ ಸಾಚಾಗಳಾಗುತ್ತಾರೆ’ ಎಂದಿದೆ.