- ಮುಂಬೈನಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆಪಿಗರು

ಮುಂಬೈ: ಎಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರ ಬನಿಯನ್‌ ಪ್ರತಿಭಟನೆಗೆ ತಿರುಗೇಟು ನೀಡಿರುವ ಬಿಜೆಪಿ ಕಾರ್ಯಕರ್ತರು, ಮುಂಬೈನಲ್ಲಿ ಶನಿವಾರ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದರು.2014ರಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಹಾಜರಾಗಲು ಅವರು ಮುಂಬೈಗೆ ಅಗಮಿಸಿದ್ದರು. ಥಾಣೆಯ ಭಿವಾಂಡಿಗೆ ರಸ್ತೆ ಮೂಲಕ ಪ್ರಯಾಣಿಸುತ್ತಿದ್ದರು. ಈ ವೇಳೆ ಇಲ್ಲಿನ ಟೋಲ್‌ ಸಮೀಪ ಬಿಜೆಪಿ ಕಾರ್ಯಕರ್ತರ ಗುಂಪು ರಾಹುಲ್‌ ವಿರುದ್ಧ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿ ಕಪ್ಪುಪಟ್ಟಿ ಪ್ರದರ್ಶಿಸಿತು.ಈ ವೇಳೆ ಪ್ರತಿಭಟನಾಕಾರರು,‘ ರಾಹುಲ್‌ ಗಾಂಧಿ, ನಿರಂತರವಾಗಿ ಪ್ರಧಾನಿಯವರು ಏನು ಮಾಡುತ್ತಾರೋ ಅದನ್ನು ವಿರೋಧಿಸುತ್ತಿದ್ದಾರೆ. ಯುವ ಕಾಂಗ್ರೆಸ್‌ ಕಾರ್ಯಕರ್ತರ ದೇಶದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ರಾಷ್ಟ್ರದ ಮಾನಹಾಳು ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.ಇದಕ್ಕೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದ್ದು, ‘ದೇಶದ ಸಮಸ್ಯೆಗಳನ್ನು ಬೇರೆಡೆ ಸೆಳೆಯುವ ತಂತ್ರ. ಆಡಳಿತ ಪಕ್ಷ ಸಾರ್ವಜನಿಕರಿಗೆ ಉತ್ತರ ಕೊಡದೆ ನಾಟಕೀಯವಾಗಿ ವರ್ತಿಸುತ್ತಿದೆ, ಸದನದಲ್ಲಿ ವಿಪಕ್ಷ ನಾಯಕನಾಗಿರುವವರಿಗೆ ಕಪ್ಪುಪಟ್ಟಿ ಪ್ರದರ್ಶಿಸುವುದು ತಪ್ಪು’ ಎಂದಿದೆ.ಕೈ ಬನಿಯನ್‌ ಪ್ರೊಟೆಸ್ಟ್‌ಗೆ ವಿಪಕ್ಷಗಳಿಂದಲೇ ಆಕ್ಷೇಪ

- ವೈಎಸ್‌ಆರ್‌, ಎಸ್‌ಪಿ, ಬಿಎಸ್‌ಪಿ, ಟಿಡಿಪಿ ಕಿಡಿನವದೆಹಲಿ: ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಬನಿಯನ್‌ ಪ್ರತಿಭಟನೆಗೆ ಕೇವಲ ಬಿಜೆಪಿ ಮಾತ್ರವಲ್ಲ, ವಿಪಕ್ಷಗಳಾದ ವೈಎಸ್‌ಆರ್‌ ಕಾಂಗ್ರೆಸ್‌, ಎಸ್‌ಪಿ, ಬಿಎಸ್‌ಪಿ ಸೇರಿದಂತೆ ಹಲವು ಪಕ್ಷಗಳು ಖಂಡನೆ ವ್ಯಕ್ತಪಡಿಸಿವೆ,

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಜಗನ್‌ ಮೋಹನ್‌ ರೆಡ್ಡಿ, ‘ಯುವ ಕಾಂಗ್ರೆಸ್‌ ಕಾರ್ಯಕರ್ತರು ನಮ್ಮನ್ನೆಲ್ಲ ನಾಚಿಕೆ ಪಡುವಂತೆ ಮಾಡಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯ ಏನಿದ್ದರೂ ಜಗತ್ತಿ ಮುಂದೆ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟದ ಮಿತ್ರಪಕ್ಷ ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಕೂಡ ಈ ಬಗ್ಗೆ ಕಿಡಿಕಾರಿದ್ದಾರೆ. ‘ಗದ್ದಲ ಸೃಷ್ಟಿಸುವುದು ತಪ್ಪು. ಅದು ವಿದೇಶಿ ಪ್ರತಿನಿಧಿಗಳ ಮುಂದೆ ದೇಶಕ್ಕೆ ಅವಮಾನ. ಈ ವಿಷಯದಲ್ಲಿ ನಾವು ಸರ್ಕಾರದ ಪರ ನಿಲ್ಲುತ್ತೇವೆ’ ಎಂದಿದ್ದಾರೆ.


ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ‘ಇದೊಂದು ಕಳವಳಕಾರಿ ವಿಷಯ.ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಕೋಪವನ್ನು ಅರೆನಗ್ನವಾಗಿ ವ್ಯಕ್ತಪಡಿಸಿದ್ದು ನಾಚಿಕೆಗೇಡು’ ಎಂದು ಟ್ವೀಟಿಸಿದ್ದಾರೆ.

ಬಿಜೆಪಿ ಮಿತ್ರ ಟಿಡಿಪಿ ನಾಯಕ, ಅಂಧ್ರ ಸಚಿವ ಲೋಕೇಶ್‌ ನಾರಾ ಪ್ರತಿಕ್ರಿಯಿಸಿದ್ದು, ‘ಕಾಂಗ್ರೆಸ್‌ ಪ್ರತಿಭಟನೆಯಿಂದ ಆಘಾತಕ್ಕೊ ಳಗಾಗಿದ್ದೇನೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಾಜಕೀಯ ಪ್ರದರ್ಶನ ನಮ್ಮ ಸ್ಥಾನಮಾನ ಕಡಿಮೆ ಮಾಡುತ್ತದೆ’ ಎಂದಿದ್ದಾರೆ.ಕಾಂಗ್ರೆಸ್ ಸಮರ್ಥನೆ:

ಮಿತ್ರ ಪಕ್ಷಗಳ ವಿರೋಧ ನಡುವೆ ಕಾಂಗ್ರೆಸ್‌ ತನ್ನ ನಿಲವು ಸಮರ್ಥಿಸಿಕೊಂಡಿದೆ. ‘ಇದು ಪ್ರಜಾಪ್ರಭುತ್ವ. ಪ್ರತಿಯೊಬ್ಬರೂ ಅಭಿಪ್ರಾಯ ಹೇಳುವುದಕ್ಕೆ ಅರ್ಹರು’ ಎಂದಿದೆ.