ಸಾರಾಂಶ
ಹಿಮಾಲಯದ ತಪ್ಪಲಿನಲ್ಲಿ ಉಗಮವಾಗಿ ಟಿಬೆಟ್, ಭಾರತ, ಬಾಂಗ್ಲಾದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ಬ್ರಹ್ಮಪುತ್ರ ನದಿಗೆ ವಿಶ್ವದಲ್ಲೇ ಅತಿದೊಡ್ಡ ಜಲವಿದ್ಯುತ್ ಉದ್ದೇಶದ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ನಿರ್ಧರಿಸಿದೆ.
ಬೀಜಿಂಗ್: ಹಿಮಾಲಯದ ತಪ್ಪಲಿನಲ್ಲಿ ಉಗಮವಾಗಿ ಟಿಬೆಟ್, ಭಾರತ, ಬಾಂಗ್ಲಾದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ಬ್ರಹ್ಮಪುತ್ರ ನದಿಗೆ ವಿಶ್ವದಲ್ಲೇ ಅತಿದೊಡ್ಡ ಜಲವಿದ್ಯುತ್ ಉದ್ದೇಶದ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ನಿರ್ಧರಿಸಿದೆ. ಇದು ಸಹಜವಾಗಿಯೇ ನದಿಪಾತ್ರದ ದೇಶಗಳಾದ ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.
ಭಾರತದ ಗಡಿಗೆ ಸಮೀಪವಿರುವ ಟಿಬೆಟ್ನ ಯರ್ಲುಂಗ್ ಜಂಗ್ಬೋ (ಭಾರತದ ಬ್ರಹ್ಮಪುತ್ರಾ) ನದಿಯ ಮೇಲೆ 11.5 ಲಕ್ಷ ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲು ಚೀನಾ ತಯಾರಿ ನಡೆಸಿದೆ ಎಂದು ಚೀನಾದ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಈ ಅಣೆಕಟ್ಟನ್ನು, ಬ್ರಹ್ಮಪುತ್ರ ನದಿಯು ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸುವ ಮುನ್ನಾ ಬರುವ ಹಿಮಾಲಯದ ಕಣಿವೆಯಲ್ಲಿರುವ ತಿರುವಿನಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿ ವಾರ್ಷಿಕವಾಗಿ 300 ಶತಕೋಟಿ ಕಿ.ವ್ಯಾ. ವಿದ್ಯುತ್ ಉತ್ಪಾದಿಸುವ ಗುರಿಯನ್ನು ಚೀನಾ ಹಾಕಿಕೊಂಡಿದೆ. ಇದು ತ್ರಿಗೋರ್ಜಸ್ ಡ್ಯಾಂನಿಂದ ಹಾಲಿ ಉತ್ಪಾದಿಸುತ್ತಿರುವ 88.2 ಶತಕೋಟಿ ಕಿಲೋವ್ಯಾಟ್ಗಿಂತ 3 ಪಟ್ಟು ಹೆಚ್ಚು ಎಂಬುದು ವಿಶೇಷ.
ಭಾರತಕ್ಕೆ ಕಳವಳ:
ಭಾರತ ಹಾಗೂ ಬಾಂಗ್ಲಾ ಪಾಲಿಗೆ ಈ ಅಣೆಕಟ್ಟು ನಿರ್ಮಾಣ ಕಳವಳಕಾರಿ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾರಣ, ಈ ಯೋಜನೆಯಿಂದಾಗಿ ಬ್ರಹ್ಮಪುತ್ರ ನದಿಯ ಬಹುಪಾಲು ಪ್ರದೇಶದ ಮೇಲೆ ಚೀನಾ ನಿಯಂತ್ರಣ ಸಾಧಿಸಲಿದ್ದು, ಉಭಯ ದೇಶಗಳ ನಡುವೆ ವಿಷಮ ಪರಿಸ್ಥಿತಿ ನಿರ್ಮಾಣವಾದಾಗ ದ್ವೇಷ ಸಾಧಿಸಲು ಭಾರತದಲ್ಲಿ ಪ್ರವಾಹ ಸೃಷ್ಟಿಸುವ ಆತಂಕವಿದೆ.