ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಬೈರತಿ ಬಸವರಾಜು ಅವರಿಗೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ. ಇದರ ನಡುವೆ ಬೈರತಿ ಹಾಗೂ ಅವರ ಆಪ್ತರಿಗೆ ಇದೀಗ ‘ಕೋಕಾ’ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

- ಕೋಕಾ ಕೇಸ್‌ಗಾಗಿ ಸಿಐಡಿ ಸುಪ್ರೀಂಗೆ? । ಈ ಕೇಸಿಗೆ ಬೇಲ್‌ ಇರಲ್ಲ

--

- ರೌಡಿ ಬಿಕ್ಲುಶಿವು ಹತ್ಯೆ ಕೇಸಲ್ಲಿ ಶಾಸಕನಿಗೆ ಬಂಧನ ಭೀತಿ

- ಕೋರ್ಟಿನಿಂದ ನಿರೀಕ್ಷಣಾ ಜಾಮೀನು ಸಿಗದ ಕಾರಣ ಖಾಣೆ- 4 ದಿನದಿಂದ ಕಾಣೆ. ರಾಜ್ಯ, ಹೊರರಾಜ್ಯದಲ್ಲಿ ಸಿಐಡಿ ತಲಾಶ್‌

==

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ರಾಜಧಾನಿ ಭಾರತೀನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಬೈರತಿ ಬಸವರಾಜು ಅವರಿಗೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ. ಇದರ ನಡುವೆ ಬೈರತಿ ಹಾಗೂ ಅವರ ಆಪ್ತರಿಗೆ ಇದೀಗ ‘ಕೋಕಾ’ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಏಕೆಂದರೆ, ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ರದ್ದುಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಸಿಐಡಿ ಮೇಲ್ಮನವಿ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.

ತಾಂತ್ರಿಕ ದೋಷದ ಕಾರಣ ನೀಡಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕೋಕಾ ಕಾಯ್ದೆ ಹೂಡಿರುವುದನ್ನು ನ್ಯಾಯಾಲಯ ರದ್ದುಪಡಿಸಿದೆ. ಈ ಕಾಯ್ದೆ ಜಾರಿಗೊಂಡರೆ ಆರೋಪಿಗಳಿಗೆ ಒಂದು ವರ್ಷ ಜಾಮೀನು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ, ನಿರೀಕ್ಷಣಾ ಜಾಮೀನಿಗೆ ಅವಕಾಶವಿರುವುದಿಲ್ಲ. ಹೀಗಾಗಿ ಕೋಕಾ ರದ್ದತಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಿಐಡಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಇದರಿಂದ ಈಗಾಗಲೇ ನಿರೀಕ್ಷಣಾ ಜಾಮೀನು ಸಿಗದೆ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಶಾಸಕ ಬೈರತಿ ಬಸವರಾಜು ಅ‍ವರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎನ್ನಲಾಗಿದೆ.

ತೀವ್ರ ತಲಾಶ್‌:

ಇದೇ ವೇಳೆ, 4 ದಿನಗಳಿಂದ ಶಾಸಕರಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಿಐಡಿ ತೀವ್ರ ತಲಾಶ್ ನಡೆಸಿದರೂ ಸುಳಿವು ಮಾತ್ರ ಸಿಕ್ಕಿಲ್ಲ.ಬೆಳಗಾವಿ ಅಧಿವೇಶನದಲ್ಲಿ ಮೊದಲ ವಾರ ಕಾಣಿಸಿಕೊಂಡಿದ್ದ ಬೈರತಿ ಬಸವರಾಜು ಅವರು ನಂತರ ಕಣ್ಮರೆಯಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ಮಾಜಿ ಸಚಿವರಿಗಾಗಿ ಪುಣೆ, ಗೋವಾ ಹಾಗೂ ತಮಿಳುನಾಡಿನಲ್ಲೂ ಸಿಐಡಿ ತಂಡಗಳು ಹುಡುಕಾಟ ನಡೆಸಿವೆ. ಮೊಬೈಲ್ ಸ್ವಿಚ್‌ ಆಫ್ ಮಾಡಿಕೊಂಡಿರುವ ಶಾಸಕರು, ಜಾಮೀನು ಅರ್ಜಿ ಇತ್ಯರ್ಥವಾಗುವವರೆಗೆ ಅಜ್ಞಾತ ಸ್ಥಳದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.