ಸಾರಾಂಶ
ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಭಾನುವಾರ ಬೆಳಗ್ಗೆ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದರು. ಖಾಸಗಿ ಆಸ್ಪತ್ರೆಯೊಂದಕ್ಕೆ ರೆಹಮಾನ್ ದಾಖಲಾದ ಬೆನ್ನಲ್ಲೇ ಅವರು ಎದೆನೋವಿನಿಂದ ಬಳಲಿದ್ದು ಆಸ್ಪತ್ರೆ ದಾಖಲಿಗೆ ಕಾರಣವಾಗಿತ್ತು ಎಂದೆಲ್ಲಾ ಸುದ್ದಿ ಹಬ್ಬಿತ್ತು.
ಆದರೆ ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ ಅವರ ಸೋದರಿ ರೆಹಾನ್, ‘ರೆಹಮಾನ್ಗೆ ಏನೂ ಆಗಿಲ್ಲ ನಿರ್ಜಲೀಕರಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಿದ್ದವು’ ಎಂದು ಹೇಳಿದ್ದರು. ಅವರ ಹೇಳಿಕೆಯ ಬೆನ್ನಲ್ಲೇ ರೆಹಮಾನ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಕಾರಣ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಅವರು ಮನೆಗೆ ಮರಳಿದ್ದಾರೆ.
ಸುಂಟರಗಾಳಿಗೆ ತತ್ತರಿಸಿದ ಅಮೆರಿಕ: 32 ಜನರ ಸಾವು
ಓಕ್ಲಹೋಮ ಸಿಟಿ: ಅಮೆರಿಕದ ಕೆಲವು ಭಾಗಗಳಲ್ಲಿ ದಿಢೀರ್ ಅಪ್ಪಳಿಸಿದ ಸುಂಟರಗಾಳಿಗೆ 32 ಜನರು ಬಲಿಯಾಗಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಗಾಳಿಯಿಂದ ಎದ್ದ ಧೂಳಿನಿಂತ ಕಡಿಮೆ ಗೋಚರತೆ ಉಂಟಾದ ಪರಿಣಾಮ ಕನ್ಹಾಸ್ನಲ್ಲಿ 50 ವಾಹನಗಳು ಅಪಘಾತಕ್ಕೀಡಾಗಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ.
ಮಿಸಿಸಿಪ್ಪಿಯ ಮೂರು ಕೌಂಟಿಗಳಲ್ಲಿ 6 ಜನರು ಸಾವನ್ನಪ್ಪಿದ್ದು. 3 ನಾಪತ್ತೆಯಾಗಿದ್ದು, 29 ಮಂದಿ ಗಾಯಗೊಂಡಿದ್ದಾರೆ. ಮಿಸೌರಿ ರಾಜ್ಯದಲ್ಲಿ ಅತಿ ಹೆಚ್ಚಿನ ಸಾವು ಸಂಭವಿಸಿದ್ದು 12 ಜನರು ಬಲಿಯಾಗಿದ್ದಾರೆ. ಸುಂಟರಗಾಳಿಯ ರಭಸಕ್ಕೆ ಮನೆಗಳು, ಶಾಲೆಗಳು, ಕಟ್ಟಡಗಳ ಮೇಲ್ಛಾವಣಿ ಕೂಡ ಹಾರಿ ಹೋಗಿದೆ. 130ಕ್ಕೂ ಹೆಚ್ಚು ಬೆಂಕಿ ಅವಘಡಗಳು ಸಂಭವಿಸಿದೆ. ಕೆಲವಡೆ ಆಲಿಕಲ್ಲು ಮಳೆ ಸುರಿದಿದೆ. ಸುಂಟರಗಾಳಿ ಪರಿಣಾಮ ಟೆಕ್ಸಾಸ್, ಓಕ್ಲಹೋಮ, ಅರ್ಕಾನ್ಸಸ್, ಮಿಸ್ಸೌರಿ, ಮಿಚಿಗನ್, ಇಂಡಿಯಾನಾ, ಇಲಿನಾಯ್ಸ್ ಮೊದಲಾದ ಕಡೆ 2ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.