ಸಾರಾಂಶ
ನವದೆಹಲಿ: ಈಶ ಫೌಂಡೇಶನ್ನ ಸ್ಥಾಪಕ ಸದ್ಗುರು ಅವರ ವ್ಯಕ್ತಿತ್ವದ ಹಕ್ಕನ್ನು ಕಾಪಾಡುವ ಸಲುವಾಗಿ, ಅವರ ಹೆಸರು, ಧ್ವನಿ, ಮುಖ ಇತ್ಯಾದಿಗಳ ದುರ್ಬಳಕೆಗೆ ದೆಹಲಿ ಹೈ ಕೋರ್ಟ್ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.
ಹಲವು ಕೆಲ ವೆಬ್ಸೈಟ್ ಮತ್ತು ಅಪರಿಚಿತರಿಂದ ಉಲ್ಲಂಘನೆಯಾಗುತ್ತಿರುವ ತಮ್ಮ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸುವಂತೆ ಕೋರಿ ಸದ್ಗುರು ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾ। ಸೌರಭ್ ಬ್ಯಾನರ್ಜಿ ಅವರ ಪೀಠ ನಡೆಸಿತು. ‘ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಯುಗದಲ್ಲಿ ಅರ್ಜಿದಾರರ ಮನವಿಯನ್ನು ತಿರಸ್ಕರಿಸಲಾಗದು. ಅಂತರ್ಜಾಲ ಮತ್ತು ನೈಜ ಪ್ರಪಂಚವನ್ನು ಒಳಗೊಂಡಂತೆ, ಯಾವುದೇ ಸಾಮಾಜಿಕ ವೇದಿಕೆಯಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಜಾರಿಗೊಳಿಸುವಿಕೆ ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿರಬೇಕು’ ಎಂದು ಅಭಿಪ್ರಾಯಪಟ್ಟಿದೆ.
‘ಸದ್ಗುರು ತಮ್ಮ ಧ್ವನಿ, ಹೆಸರು, ಸಹಿ, ಚಿತ್ರ, ಹೋಲಿಕೆ, ಗಾಯನ, ಉಚ್ಚಾರಣಾ ಶೈಲಿ ಮತ್ತು ವಿಶಿಷ್ಟವಾದ ಉಡುಗೆ ತೊಡುಗೆ ಇತ್ಯಾದಿಗಳಿಂದ ವಿಶೇಷ ವ್ಯಕ್ತಿತ್ವ ಹೊಂದಿದ್ದಾರೆ. ಕೆಲವರು ವಾಣಿಜ್ಯ ಲಾಭಕ್ಕಾಗಿ ಅವರ ಚಿತ್ರಗಳು, ಧ್ವನಿ, ಹೋಲಿಕೆ ಮತ್ತು ವೀಡಿಯೋಗಳನ್ನು ಮಾರ್ಪಡಿಸಲು ಎಐ ರೀತಿಯ ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಇದನ್ನು ತಡೆಯದಿದ್ದರೆ, ತಪ್ಪು ಸಂದೇಶಗಳು ಕಾಡ್ಗಿಚ್ಚಿನಂತೆ ಹಬ್ಬುತ್ತವೆ’ ಎಂದು ಬ್ಯಾನರ್ಜಿ ಹೇಳಿದ್ದಾರೆ. ಜತೆಗೆ, ಹಾಗೆ ಮಾಡುವ ಖಾತೆ ಮತ್ತು ಅಕೌಂಟ್ಗಳನ್ನು ಅಮಾನತುಗೊಳಿಸುವಂತೆ ದೂರಸಂಪರ್ಕ ಇಲಾಖೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಆದೇಶಿಸಿದ್ದಾರೆ.