ಕಾಶಿ ದೇಗುಲದಲ್ಲಿ ಕೇಸರಿಧಾರಿ ಪೊಲೀಸರು: ವಿವಾದ

| Published : Apr 13 2024, 01:02 AM IST / Updated: Apr 13 2024, 05:50 AM IST

ಸಾರಾಂಶ

ಪವಿತ್ರ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಭದ್ರತೆಗೆ ನಿಯೋಜನೆ ಆಗಿರುವ ಪೊಲೀಸರು ಅರ್ಚಕರ ರೀತಿ ಕೇಸರಿ ಉಡುಪು ಧರಿಸಿ ಕರ್ತವ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.

ವಾರಾಣಸಿ: ಪವಿತ್ರ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಭದ್ರತೆಗೆ ನಿಯೋಜನೆ ಆಗಿರುವ ಪೊಲೀಸರು ಅರ್ಚಕರ ರೀತಿ ಕೇಸರಿ ಉಡುಪು ಧರಿಸಿ ಕರ್ತವ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರ ನಡೆ ಭಾರೀ ವಿವಾದ ಸೃಷ್ಟಿಸಿದೆ.

ಪೊಲೀಸರು ಕೇಸರಿಧಾರಿ ಆಗಿರುವ ವಿಡಿಯೋಗಳು ಈಗ ವೈರಲ್‌ ಆಗಿವೆ. ಅದರಲ್ಲಿ ಪೊಲೀಸರು ಸಾಂಪ್ರದಾಯಿಕ ಉಡುಪುಗಳು ಧರಿಸಿದ್ದಾರೆ. ಪುರುಷ ಪೊಲೀಸ್ ಅಧಿಕಾರಿಗಳು ಧೋತಿ, ಕುರ್ತಾವನ್ನು ಧರಿಸಿದ್ದರೆ ಮಹಿಳಾ ಅಧಿಕಾರಿಗಳು ಸಲ್ವಾರ್ ಕುರ್ತಾ ಧರಿಸಿದ್ದಾರೆ. ಅಲ್ಲದೇ ಹಣೆಯಲ್ಲಿ ಅರ್ಚಕರಂತೆ ತಿಲಕವನ್ನಿಟ್ಟುಕೊಂಡಿದ್ದಾರೆ.

ಅಖಿಲೇಶ್‌ ಆಕ್ರೋಶ: ಪೊಲೀಸರ ಈ ನಡೆಯನ್ನು ಕಟುವಾಗಿ ಟೀಕಿಸಿರುವ ಸಮಾಜವಾದಿ ಪಾರ್ಟಿ ನೇತಾರ ಅಖಿಲೇಶ್ ಯಾದವ್ ,‘ಪೊಲೀಸರು ತಮ್ಮ ಸಮವಸ್ತ್ರವನ್ನು ಹೊರತುಪಡಿಸಿ , ಇನ್ಯಾವುದೋ ಉಡುಪುಗಳನ್ನು ಧರಿಸುವುದಕ್ಕೆ ಅನುಮತಿ ನೀಡುವುದು ಭದ್ರತೆಗೆ ಅಪಾಯ ತಂದೊಡ್ಡುತ್ತದೆ. ಪೊಲೀಸರು ಈ ರೀತಿಯ ಉಡುಪುಗಳನ್ನು ಧರಿಸುವುದು ಎಷ್ಟು ಸರಿ? ಇದು ಮುಂದೆ ವಂಚಕ ಕೃತ್ಯಗಳಿಗೆ ದಾರಿಯಾದರೆ ಹೊಣೆಯಾರು..? ಇಂತಹ ಆದೇಶಗಳನ್ನು ನೀಡಿದವರನ್ನು ಕೂಡಲೇ ವಜಾಗೊಳಿಸಬೇಕು’ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾರಾಣಸಿ ಪೊಲೀಸ್ ಕಮಿಷನರ್ ಮೋಹಿತ್ ಅರ್ಗವಾಲ್ ,‘ ಪೊಲೀಸರು ಅರ್ಚಕರ ಉಡುಪನ್ನು ಧರಿಸಿದರೆ ಜನರು ಅದನ್ನು ಭದ್ರತೆಯ ದೃಷ್ಟಿಯಿಂದ ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.