ನವದೆಹಲಿ: ಹಲವು ವರ್ಷಗಳಷ್ಟು ಹಳೆಯದಾದ ಏರ್‌ಸೆಲ್ -ಮ್ಯಾಕ್ಸಿಸ್ ಒಪ್ಪಂದ ಅಕ್ರಮದ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ದೊರೆತಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ. ಇದರ ಬೆನ್ನಲ್ಲೇ ವಿಚಾರಣೆಯನ್ನು ತ್ವರಿತಗೊಳಿಸಲು ತನಿಖಾ ಸಂಸ್ಥೆಯು ದಿಲ್ಲಿ ರೋಸ್ ಅವೆನ್ಯೂದ ವಿಶೇಷ ನ್ಯಾಯಾಲಯದಲ್ಲಿ ಚಿದಂಬರಂ ವಿರುದ್ಧದ ಅನುಮತಿ ಪತ್ರ ಸಲ್ಲಿಸಿದೆ. ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿಯು ಸಮರ್ಥ ಪ್ರಾಧಿಕಾರವಾಗಿದೆ.

ಪಾಕ್‌ ಸಾಲಕ್ಕಿಂತ ಜಮ್ಮು ಬಜೆಟ್‌ ಗಾತ್ರವೇ ಹಿರಿದು: ಭಾರತ ಚಾಟಿ

ವಿಶ್ವಸಂಸ್ಥೆ: ಸಾಲದಿಂದಲೇ ಪ್ರಸಿದ್ಧಿ ಪಡೆದಿರುವ ಪಾಕಿಸ್ತಾನಕ್ಕೆ ಭಾರತ ಮತ್ತೊಮ್ಮೆ ವಿಶ್ವಸಂಸ್ಥೆಯಲ್ಲಿ ಮುಜುಗರ ಉಂಟುಮಾಡಿದೆ. ‘ಐಎಂಎಫ್‌ನಿಂದ ಪಾಕ್‌ ಮನವಿ ಮಾಡಿರುವ ಸಾಲಕ್ಕಿಂತ, ಜಮ್ಮು ಕಾಶ್ಮೀರದ ಬಜೆಟ್‌ ಎರಡರಷ್ಟಿದೆ’ ಎಂದು ವ್ಯಂಗ್ಯಭರಿತ ತಿರುಗೇಟು ನೀಡಿದೆ.ಯುಎನ್‌ನ ಮಾನವ ಹಕ್ಕುಗಳ ಮಂಡಳಿಯ ಸಭೆ ವೇಳೆ ಪಾಕಿಸ್ತಾನವು ಜಮ್ಮು ಕಾಶ್ಮೀರದ ವಿಷಯವನ್ನು ಎತ್ತಿ ಭಾರತವನ್ನು ಕೆಣಕಲು ಯೋಚಿಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡುವ ಹಕ್ಕನ್ನು ಬಳಸಿಕೊಂಡ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ನಿಯೋಗದ ಮೊದಲ ಕಾರ್ಯದರ್ಶಿ ಅನುಪಮಾ ಸಿಂಗ್‌ ಮಾತನಾಡಿ, ‘ಇತ್ತೀಚೆಗೆ ಪಾಕ್‌ ಐಎಂಎಫ್‌ನಿಂದ ಕೇಳಿದ ಸಾಲಕ್ಕಿಂತ, ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ಮೀಸಲಿಟ್ಟಿರುವ ಬಜೆಟ್‌ ಎರಡು ಪಟ್ಟು ದೊಡ್ಡದಿದೆ’ ಎಂದರು.

ನಕ್ಸಲನಿಂದಲೇ ಶರಣಾಗಲು ಉದ್ದೇಶಿಸಿದ್ದ ನಕ್ಸಲ್‌ ನಾಯಕ ಹತ್ಯೆ

ಭುವನೇಶ್ವರ/ಪುಲ್ಬಾನಿ (ಒಡಿಶಾ): ಪೊಲೀಸರಿಗೆ ಶರಣಾಗಲು ಉದ್ದೇಶಿದಿದ್ದ ಮಾವೋವಾದಿ ಕಮಾಂಡರ್‌ ಒಬ್ಬನನ್ನು ಇನ್ನೊಬ್ಬ ಮಾವೋವಾದಿ ನಾಯಕ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಒಡಿಶಾದ ಕಂಧಮಾಲ್‌ ಜಿಲ್ಲೆಯ ಪಕಾರಿ ಮೀಸಲು ಅರಣ್ಯದಲ್ಲಿ ನಡೆದಿದೆ.ಅನ್ವೇಶ್ ಹತ ನಕ್ಸಲ್‌ ಕಮಾಂಡರ್‌. ಈತನ ತಲೆಗೆ 22 ಲಕ್ಷ ರು. ಬಹುಮಾನವಿತ್ತು. ಕಂಧಮಾಲ್‌ ಜಿಲ್ಲೆ ಅರಣ್ಯದಲ್ಲಿ ಒಡಿಶಾ ಪೊಲೀಸರು, ಅನ್ವೇಶ್‌ ಕೊಳೆತ ದೇಹವನ್ನು ಪತ್ತೆ ಹಚ್ಚಿದ್ದಾರೆ.


‘ಕುಖ್ಯಾತ ನಕ್ಸಲ್‌ ನಾಯಕ ಸುಕ್ರು ಮತ್ತು ಆತನ ಸಹಚರರು ಜ.29ರಂದು ಅನ್ವೇಶ್‌ನನ್ನು ಕೊಂದಿದ್ದಾರೆ. ಅನ್ವೇಶ್‌ ತನ್ನ ಇತರ ಮಾವೋವಾದಿ ಸಹಚರರ ಜತೆ ಒಡಿಶಾ ಪೊಲೀಸರಿಗೆ ಶರಣಾಗಲು ತಯಾರಿ ನಡೆಸಿದ್ದ ವೇಳೆ ಸುಕ್ರು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಸುನೇತ್ರಾ ಎನ್‌ಸಿಪಿ ಅಧ್ಯಕ್ಷೆ, ಪುತ್ರಗೆ ರಾಜ್ಯಸಭಾ ಸ್ಥಾನ

ಮುಂಬೈ: ಮಹಾರಾಷ್ಟ್ರ ಡಿಸಿಎಂ ಆಗಿದ್ದ ಅಜಿತ್‌ ಪವಾರ್‌ರ ಮರಣಾನಂತರ ಅವರ ಹುದ್ದೆಗೇರಿದ್ದ ಪತ್ನಿ ಸುನೇತ್ರಾ ಪವಾರ್‌ ಇದೀಗ ಅಧಿಕೃತವಾಗಿ ಅಜಿತ್‌ರ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಮುಖ್ಯಸ್ಥೆಯಾಗಿದ್ದಾರೆ. ಇದೇ ವೇಳೆ ಸುನೇತ್ರಾ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯಸಭೆ ಸ್ಥಾನವನ್ನು ಅಜಿತ್‌ ಪುತ್ರ ಪಾರ್ಥ ಪವಾರ್‌ಗೆ ನೀಡಲು ನಿರ್ಧರಿಸಲಾಗಿದೆ.ಗುರುವಾರ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸುನೇತ್ರಾರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಳಿಕ ಮಾತನಾಡಿದ ಹಿರಿಯ ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲ್‌ ತಮ್ಮ ಹಾಗೂ ಅಜಿತ್‌ರ 35 ವರ್ಷಗಳ ಸುದೀರ್ಘ ರಾಜಕೀಯ ಒಡನಾಟವನ್ನು ಸ್ಮರಿಸಿಕೊಳ್ಳುತ್ತಾ, ಸುನೇತ್ರಾರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.‘ಹಲವು ಚರ್ಚೆಗಳ ಬಳಿಕ, ಮುಂದಿನ ಹಾದಿಯ ಬಗ್ಗೆ ಪಕ್ಷದ ನಾಯಕರಲ್ಲಿ ಸಂಪೂರ್ಣ ಸ್ಪಷ್ಟತೆ ಮತ್ತು ಏಕತೆ ಇದೆ. ಹೊಸ ನಾಯಕತ್ವದ ಅಡಿಯಲ್ಲೂ ಇದೇ ಒಗ್ಗಟ್ಟು ಹಾಗೂ ನವೀಕೃತ ಶಕ್ತಿಯಲ್ಲಿ ಪಕ್ಷ ಮುನ್ನಡೆಯಬೇಕು’ ಎಂದು ಪಟೇಲ್‌ ಪಕ್ಷದ ನಾಯಕರನ್ನು ಉದ್ದೇಶಿಸಿ ಆಗ್ರಹಿಸಿದರು. ಇದಕ್ಕೆ ಎಲ್ಲರಿಂದ ಬೆಂಬಲ ವ್ಯಕ್ತವಾಯಿತು.

ಇಂದಿನಿಂದ 4 ದಿನ ಕೆನಡಾ ಪ್ರಧಾನಿ ಕಾರ್ನಿ ಭಾರತಕ್ಕೆ

ಪಿಟಿಐ ನವದೆಹಲಿಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಶುಕ್ರವಾರ ಭಾರತಕ್ಕೆ ಆಗಮಿಸಲಿದ್ದು, 4 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇದು ಅವರ ಮೊದಲ ಭಾರತ ಪ್ರವಾಸವಾಗಿದೆ.

2023 ರಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆ ನಿಜ್ಜರ್‌ ಹತ್ಯೆ ನಂತರ ಭಾರತ-ಕೆನಡಾ ರಾಜತಾಂತ್ರಿಕ ಸಂಬಂಧ ಹಳಸಿತ್ತು. ಆದರೆ ಕಳೆದ ವರ್ಷ ಕಾರ್ನಿ ಪ್ರಧಾನಿ ಆದ ನಂತರ ಸಂಬಂಧ ಸುಧಾರಣೆಯತ್ತ ಸಾಗುತ್ತಿದೆ. ಕಾರ್ನಿ ಅವರ ಭೇಟಿ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ವೇಗ ಹೆಚ್ಚಿಸುವ ಗುರಿ ಹೊಂದಿದೆ.ಪ್ರವಾಸದ ವೇಳೆ ಅವರು ಮೊದಲು ಮುಂಬೈ ಆಗಮಿಸಲಿದ್ದು, ಅಲ್ಲಿ ಅವರು ಪ್ರತ್ಯೇಕ ವ್ಯಾಪಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ, ನಂತರ ಭಾನುವಾರ ದಿಲ್ಲಿಗೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.