- ರಾಜಧಾನಿ ಎಕ್ಸ್‌ಪ್ರೆಸ್‌ ಎಸಿ ಕೋಚ್‌ನಲ್ಲಿ ಅಗ್ನಿ

- ಮ.ಪ್ರ.ದಲ್ಲಿ ಘಟನೆ । 68 ಪ್ರಯಾಣಿಕರು ಸೇಫ್‌

- ಐವರಿಗೆ ಸಣ್ಣಪುಟ್ಟ ಗಾಯ । ಸಕಾಲಕ್ಕೆ ಎಲ್ಲರ ರಕ್ಷಣೆ

ಪಿಟಿಐ ರತ್ಲಾಂ (ಮ.ಪ್ರ.)

ಕೇರಳದ ತಿರುವನಂತಪುರಂನಿಂದ ದೆಹಲಿಯ ಹಜರತ್‌ ನಿಜಾಮುದ್ದೀನ್‌ಗೆ ಕರ್ನಾಟಕ ಮೂಲಕ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್‌ ದೊಡ್ಡ ಅನಾಹುತ ಸಂಭವಿಸಿಲ್ಲ. ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ.


ಕರ್ನಾಟಕದ ಮಂಗಳೂರು, ಉಡುಪಿ, ಕಾರವಾರ ಮೂಲಕ ಸಾಗುವ ಈ ಎಕ್ಸ್‌ಪ್ರೆಸ್‌ನ ಬಿ1 ಕೋಚ್‌ನಲ್ಲಿ ಅವಘಢ ಸಂಭವಿಸಿದೆ ಈ ವೇಳೆ ಕೋಚ್‌ನಲ್ಲಿ 68 ಪ್ರಯಾಣಿಕರಿದ್ದರು. ಘಟನೆ ನಡೆಯುತ್ತಿದ್ದಂತೆ ಅವರೆಲ್ಲರನ್ನೂ 15 ನಿಮಿಷದಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಇನ್ನು ಬೆಂಕಿ ಹೊತ್ತಿಕೊಂಡ ರೈಲನ್ನು ಕೋಚ್‌ನಿಂದ ಬೇರ್ಪಡಿಸಿ ಸುರಕ್ಷತೆಯ ದೃಷ್ಟಿಯಿಂದ ಓವರ್‌ಹೆಡ್‌ ವಿದ್ಯುತ್‌ ಸರಬರಾಜನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು.

ಬೆಂಕಿಗೆ ಕಾರಣ ಏನೆಂದು ತಿಳಿಯಲು ತನಿಖೆ ನಡೆದಿದೆ. ಘಟನೆಯಿಂದಾಗಿ ಮಾರ್ಗದ ಹಲವು ರೈಲುಗಳು ವಿಳಂಬವಾದವು.