ಸಾರಾಂಶ
ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಪಾಕಿಸ್ತಾನ ಭಾರತದ ಧಾರ್ಮಿಕ ಸಂಗತಿಗಳಲ್ಲಿ ಮೂಗು ತೂರಿಸಿ ಉದ್ಧಟತನ
ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಪಾಕಿಸ್ತಾನ ಭಾರತದ ಧಾರ್ಮಿಕ ಸಂಗತಿಗಳಲ್ಲಿ ಮೂಗು ತೂರಿಸಿ ಉದ್ಧಟತನ ಮೆರೆದಿದೆ. ಪಾಕ್ ಸಂಸದೆ ಪಲ್ವಾಶಾ ಮೊಹಮ್ಮದ್ ಝೈ ಖಾನ್, ಅಯೋಧ್ಯೆಯ ಹೊಸ ಬಾಬರಿ ಮಸೀದಿಗೆ ಪಾಕಿಸ್ತಾನಿ ಸೈನಿಕರೇ ಇಟ್ಟಿಗೆ ಇಡಲಿದ್ದಾರೆ ಎಂದು ನಾಲಗೆ ಹರಿಬಿಟ್ಟಿದ್ದಾರೆ.
ಮಂಗಳವಾರ ಪಾಕಿಸ್ತಾನದ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ಹೊಸ ಬಾಬರಿ ಮಸೀದಿಯ ಇಟ್ಟಿಗೆಯನ್ನು ಪಾಕಿಸ್ತಾನಿ ಸೈನಿಕರೇ ಇಡುತ್ತಾರೆ ಮತ್ತು ಮೊದಲ ಆಜಾನ್ ಅನ್ನು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನೀಡುತ್ತಾರೆ. ನಾವು ಬಳೆ ತೊಟ್ಟು ಕುಳಿತಿಲ್ಲ’ ಎಂದಿದ್ದಾರೆ.
ಅಲ್ಲದೆ, ‘ಭಾರತ ಪಾಕಿಸ್ತಾನಕ್ಕೆ ಬೆದರಿಕೆ ಹಾಕಲು ಯತ್ನಿಸುತ್ತಿದೆ. ಆದರೆ ಭಾರತದ ಸಿಖ್ ಸೈನಿಕರು ಪಾಕ್ ಮೇಲೆ ದಾಳಿ ಮಾಡುವುದಿಲ್ಲ ಎಂದು ಅವರಿಗೆ (ಭಾರತಕ್ಕೆ) ತಿಳಿಸಿ. ಏಕೆಂದರೆ ಪಾಕಿಸ್ತಾನ ಗುರುನಾನಕ್ರ ಭೂಮಿ’ ಎಂದು ಹೇಳಿದ್ದಾರೆ.