10 ದಿನ 150 ಅಡಿ ಆಳದ ಬೋರ್ವೆಲ್‌ನಲ್ಲಿ ಸಿಕ್ಕಿ ಬಿದ್ದ 3 ವರ್ಷದ ಬಾಲಕಿ ರಕ್ಷಣೆ ಬಳಿಕ ಸಾವು

| Published : Jan 02 2025, 12:30 AM IST / Updated: Jan 02 2025, 04:40 AM IST

10 ದಿನ 150 ಅಡಿ ಆಳದ ಬೋರ್ವೆಲ್‌ನಲ್ಲಿ ಸಿಕ್ಕಿ ಬಿದ್ದ 3 ವರ್ಷದ ಬಾಲಕಿ ರಕ್ಷಣೆ ಬಳಿಕ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

  150 ಅಡಿ ಆಳದ ಬೋರ್‌ವೆಲ್‌ನಲ್ಲಿ 10 ದಿನಗಳಿಂದ ಸಿಕ್ಕಿಬಿದ್ದ 3 ವರ್ಷದ ಬಾಲಕಿ, ರಕ್ಷಿಸಿದ ಬಳಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಕೋಟ್‌ಪೂತ್ಲಿ: 150 ಅಡಿ ಆಳದ ಬೋರ್‌ವೆಲ್‌ನಲ್ಲಿ 10 ದಿನಗಳಿಂದ ಸಿಕ್ಕಿಬಿದ್ದ 3 ವರ್ಷದ ಬಾಲಕಿ, ರಕ್ಷಿಸಿದ ಬಳಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಇದರೊಂದಿಗೆ ಬಾಲಕಿ ರಕ್ಷಣೆಗೆ ನಡೆದ 10 ದಿನಗಳ ಕಾರ್ಯಾಚರಣೆ ವಿಫಲವಾಗಿದೆ.

ಕಿರಾತ್‌ಪುರ ಎಂಬಲ್ಲಿ ಚೇತನಾ (3) ಡಿ.23ರಂದು ಮನೆಯ ಬಳಿ ಆಡುತ್ತಿದ್ದಾಗ ಕೊಳವೆ ಬಾವಿಯೊಳಗೆ ಬಿದ್ದಿದ್ದಳು. ಆಕೆಯ ರಕ್ಷಣೆಗೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆ ಯತ್ನಿಸಿದ್ದವರೂ ಅದು ಫಲ ಕೊಟ್ಟಿರಲಿಲ್ಲ. ಬಳಿಕ ದೆಹಲಿ, ಜೈಪುರದ ಮೆಟ್ರೋ ತಜ್ಞರು ಆಗಮಿಸಿ 12 ಅಡಿ ಅಗಲದ ಸುರಂಗ ಕೊರೆದು ಚೇತನಾಳನ್ನು ಹೊರತೆಗೆದಿದ್ದರು. ಈ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಚೇತನಾಳನ್ನು ಆಸ್ಪತ್ರೆಗೆ ದಾಖಲಿಸುವ ಯತ್ನ ಮಾಡಲಾಯಿತಾದರೂ, ಈ ವೇಳೆಗೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

35 ಎನ್ಕೌಂಟರ್‌ನಲ್ಲಿ ಭಾಗಿ ಆಗಿದ್ದ ತರಕ್ಕಾ ಸೇರಿ 11 ನಕ್ಸಲರು ಶರಣುಗಡ್‌

ಚಿರೋಲಿ: ಕಳೆದ 38 ವರ್ಷಗಳ ಅವಧಿಯಲ್ಲಿ ಭದ್ರತಾ ಪಡೆಗಳ ಜೊತೆ ನಡೆದ 35 ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ನಕ್ಸಲರ್‌ ವಿಮಲಾ ಚಂದ್ರ ಸಿಡಂ ಅಲಿಯಾಸ್‌ ತರಕ್ಕಾ ಸೇರಿದಂತೆ 11 ನಕ್ಸಲರು, ಬುಧವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಸಮ್ಮುಖದಲ್ಲಿ ಶರಣಾಗಿದ್ದಾರೆ.ಮೋಸ್ಟ್‌ ವಾಂಟೆಡ್‌ ನಕ್ಸಲ್‌ ಎಂದೇ ಗುರುತಿಸಿಕೊಂಡಿದ್ದ ತರಕ್ಕಾ ಸುಳಿವು ನೀಡಿದವರಿಗೆ 25 ಲಕ್ಷ ರು. ಬಹುಮಾನವನ್ನು ಘೋಷಿಸಲಾಗಿತ್ತು. ಶರಣಾಗತರಾದ ಎಲ್ಲಾ 11 ನಕ್ಸಲರ ತಲೆಗೆ ಒಟ್ಟು 1 ಕೋಟಿ ರು. ಬಹುಮಾನ ಘೋಷಣೆಯಾಗಿತ್ತು.

62 ವರ್ಷದ ತರಕ್ಕಾ, 1986ರಲ್ಲಿಯೇ ನಕ್ಸಲ್‌ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಇವರ ವಿರುದ್ಧ 66 ಪ್ರಕರಣಗಳು ದಾಖಲಾಗಿತ್ತು.

ಪೂಜಾ ಸ್ಥಳಗಳ ಕಾಯ್ದೆ ಜಾರಿ: ಒವೈಸಿ ಅರ್ಜಿ ಇಂದು ವಿಚಾರಣೆ

ನವದೆಹಲಿ: ಪೂಜಾಸ್ಥಳಗಳ ಯಥಾಸ್ಥಿತಿ ಕಾಯ್ದುಕೊಳ್ಳುವ 1991ರ ಕಾಯ್ದೆ ಜಾರಿ ಕೋರಿ ಎಂಐಎಂ ನಾಯಕ, ಸಂಸದ ಅಸಾದುದ್ದೀನ್‌ ಒವೈಸಿ ಸಲ್ಲಿಸಿರುವ ಅರ್ಜಿ, ಗುರುವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಮಂದಿರ ಜಾಗದಲ್ಲಿ ನಿರ್ಮಾಣವಾಗಿರುವ ಮಸೀದಿ ಸಮೀಕ್ಷೆ ಕುರಿತು ಹಲವು ನ್ಯಾಯಾಲಯಗಳು ಆದೇಶ ಹೊರಡಿಸುತ್ತಿರುವ ಬೆನ್ನಲ್ಲೇ ಈ ಮಹತ್ವದ ಅರ್ಜಿ ವಿಚಾರಣೆಗೆ ಬಂದಿದೆ.

1947ರ ಆ.15 ರಂದು ಇದ್ದ ಪೂಜಾ ಸ್ಥಳಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಕುರಿತು 1991ರಲ್ಲಿ ಕಾಯ್ದೆ ರೂಪಿಸಲಾಗಿತ್ತು. ಇದಕ್ಕೆ ಅಯೋಧ್ಯೆ ಪ್ರಕರಣವನ್ನು ಮಾತ್ರ ಹೊರತುಪಡಿಸಲಾಗಿತ್ತು. ಆದರೆ ಈ ಕಾಯ್ದೆ ಹೊರತಾಗಿಯೂ ಇತ್ತೀಚೆಗೆ ಹಲವು ನ್ಯಾಯಾಲಯಗಳು, ಮಂದಿರ ಒಡೆದು ನಿರ್ಮಿಸಿದ್ದ ಹಲವು ಮಸೀದಿಗಳ ಸಮೀಕ್ಷೆಗೆ ಸೂಚಿಸಿದ್ದವು. ಹೀಗಾಗಿ 1991ರ ಕಾಯ್ದೆ ಜಾರಿಗೆ ಕೇಂದ್ರಕ್ಕೆ ಸೂಚಿಸಬೇಕೆಂದು ಕೋರಿ ಸುಪ್ರೀಂಕೋರ್ಟ್‌ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.ಈ ಅರ್ಜಿಗಳ ಕುರಿತು ಕಳೆದ ಡಿ.12ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ, ಹಾಲಿ ಅರ್ಜಿಗಳು ಇತ್ಯರ್ಥ ಆಗುವವರೆಗೂ, ಕೋರ್ಟ್‌ಗಳು ಹೊಸದಾಗಿ ಯಾವುದೇ ಸಮೀಕ್ಷೆಗೆ ಆದೇಶಿಸಬಾರದು ಎಂದು ಸೂಚಿಸಿತ್ತು.

ಅದರ ಬೆನ್ನಲ್ಲೇ ಡಿ.17ರಂದು ಒವೈಸಿ ಕೂಡಾ ಇಂಥದ್ದೇ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 1991ರ ಪೂಜಾ ಸ್ಥಳಗಳ ಕಾಯ್ದೆ ಜಾರಿಗೆ ಕೇಂದ್ರಕ್ಕೆ ಸೂಚಿಸಬೇಕೆಂದು ಮನವಿ ಮಾಡಿದ್ದರು.