ಸಾರಾಂಶ
ನವದೆಹಲಿ : ಚುನಾವಣಾ ಆಯೋಗ ಮತಗಳವು ಮಾಡುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಆಯೋಗ ಮತ್ತೆ ತೀಕ್ಷ್ಣ ಮಾತುಗಳಲ್ಲಿ ಪ್ರತಿಕ್ರಿಯೆ ನೀಡಿದೆ. ‘ಮತಗಳ್ಳತನ’ದಂತಹ ಕೊಳಕು ನುಡಿಗಟ್ಟು ಉಲ್ಲೇಖಿಸುವ ಮೂಲಕ ಸುಳ್ಳು ಕಥನವನ್ನು ಸೃಷ್ಟಿಸಬೇಡಿ. ಅದರ ಬದಲು ಅದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಿ ಎಂದು ತಾಕೀತು ಮಾಡಿದೆ.
ಈ ಬಗ್ಗೆ ಚುನಾವಣಾ ಆಯೋಗ ಹೇಳಿಕೆ ಬಿಡುಗಡೆ ಮಾಡಿದ್ದು, ‘1951-52ರಲ್ಲಿ ನಡೆದ ಮೊದಲ ಚುನಾವಣೆಯಿಂದಲೇ ಒಬ್ಬ ವ್ಯಕ್ತಿ-ಒಂದು ಮತ ನೀತಿ ಜಾರಿಯಲ್ಲಿದೆ. ಯಾವುದೇ ವ್ಯಕ್ತಿ ಚುನಾವಣೆಯೊಂದರಲ್ಲಿ 2 ಬಾರಿ ಮತ ಚಲಾಯಿಸಿದ ದಾಖಲೆಯಿದ್ದರೆ, ಅದನ್ನು ಲಿಖಿತ ಅಫಿಡವಿಟ್ ಮೂಲಕ ಚುನಾವಣಾ ಆಯೋಗಕ್ಕೆ ನೀಡಬೇಕು. ಅದರ ಹೊರತಾಗಿ ಆಧಾರರಹಿತವಾಗಿ ಮತಗಳ್ಳತನದಂತಹ ಕೊಳಕು ಪದಪ್ರಯೋಗ ಮಾಡಬಾರದು’ ಎಂದು ಆಗ್ರಹಿಸಿದೆ.
ಕರ್ನಾಟಕ, ಮಹಾರಾಷ್ಟ್ರ, ಬಿಹಾರ ಸೇರಿ ದೇಶದ ಅನೇಕ ರಾಜ್ಯಗಳಲ್ಲಿ ಮತಗಳ್ಳತನ ನಡೆದಿದೆ. ಇದರಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 48 ಕ್ಷೇತ್ರಗಳಲ್ಲಿ ಸೋತಿದೆ ಎಂಬದು ರಾಹುಲ್ ಆರೋಪ.